ಮೀನುಗಾರರಿಗೆ ಕೋವಿಡ್ ಪರಿಹಾರ ಪ್ಯಾಕೇಜ್
ಉಡುಪಿ, ಜೂ.18: ರಾಜ್ಯದಲ್ಲಿ ಕೋವಿಡ್-19ರ 2ನೇ ಅಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು ಇದರಿಂದ ಬಾಧಿತ ವಾದ ಸಮಾಜದ ವಿವಿಧ ವರ್ಗಗಳಿಗೆ ಸರಕಾರ ಈಗಾಗಲೇ ಪರಿಹಾರ ಪ್ಯಾಕೇಜ್ನ್ನು ಘೋಷಣೆ ಮಾಡಿದೆ.
ಪ್ರಸ್ತುತ ಸಾಲಿನಲ್ಲಿ ಭಾರತ ಸರಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿಕೊಂಡಿರುವ ಮೀನುಗಾರರಿಗೆ ತಲಾ 3000 ರೂ.ಗಳ ಪರಿಹಾರವನ್ನು ಕೋವಿಡ್ ಪ್ಯಾಕೇಜ್ ನಿಧಿಯಡಿ ಸರಕಾರದ ಮಾರ್ಗಸೂಚಿ ಮೇರೆಗೆ ಘೋಷಿಸಲಾಗಿದೆ.
ಈ ಯೋಜನೆಯ ಪರಿಹಾರವನ್ನು ಡಿಬಿಟಿ ಮುಖಾಂತರ ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸ ಬೇಕಾಗಿರುವುದರಿಂದ ಎಲ್ಲಾ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದಲಿ್ಲ ಕೂಡಲೇ ಲಿಂಕ್ ಮಾಡಿಸಬೇಕಾಗಿದೆ.
ಸಾಂಪ್ರದಾಯಿಕ ದೋಣಿ ಮಾಲಕರು (ಎನ್ಎಂ-ನಾನ್ ಮೋಟರೈಸ್ಡ್ ಯಡಿಯಲ್ಲಿ ನೋಂದಾಯಿತ ದೋಣಿ ಮಾಲಕರು) ತಮ್ಮ ದೋಣಿಯ ಆರ್ಸಿ, ಆಧಾರ್ಕಾರ್ಡ್, ಮೊಬೈಲ್ ಸಂಖ್ಯೆ, ಆಧಾರ್ ಲಿಂಕ್ ಲಗತ್ತಿಸಲಾದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಸಂಬಂಧಿತ ಪ್ರಾಧಿಕೃತ ಅಧಿಕಾರಿಗಳ ಕಚೇರಿಗೆ ಒದಗಿಸಬೇಕೆಂದು ಮೀನುಗಾರಿಕಾ ಇಲಾಖೆಯ ಹಿರಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





