ಯೋಗದಿಂದ ಸ್ವಸ್ಥ ದೇಶ ಕಟ್ಟಲು ಸಾಧ್ಯ: ಯೋಗ ಗುರು ಡಾ.ಎನ್.ಆರಾಧ್ಯ
ಬೆಂಗಳೂರು, ಜೂ.21: ವಿಶ್ವದಾದ್ಯಂತ ಆಚರಿಸುವ ಯೋಗ ಭಾರತದ ಸನಾತನ ಧರ್ಮದ ಕೊಡುಗೆಯಾಗಿದೆ. ಹೀಗಾಗಿಯೇ ಉಳಿದೆಲ್ಲ ದೇಶಗಳಿಗಿಂತ ನಾವು ಯೋಗವನ್ನು ಹೆಚ್ಚಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಸಮಾಜ, ಅದರ ಮೂಲಕ ಸ್ವಸ್ಥ ದೇಶ ಕಟ್ಟಲು ಸಾಧ್ಯ ಎಂದು ಯೋಗ ಗುರು ಡಾ.ಎನ್.ಆರಾಧ್ಯ ಹೇಳಿದರು.
ಸೋಮವಾರ ಯೋಗಗಂಗೋತ್ರಿಯಿಂದ ಆನ್ಲೈನ್ನಲ್ಲಿ 7ನೆ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಮಾತನಾಡಿ, ಯೋಗವು ನಿಸರ್ಗದ ಭಾಗವಾಗಿದೆ. ನಿಸರ್ಗ ಕಾಪಾಡುವುದರಿಂದ ಮರಗಳು, ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಯುವಜನತೆಯು ಹೆಚ್ಚು ಹೆಚ್ಚು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಬೇಕೆಂದು ಕರೆ ನೀಡಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಗೆ ಶುಭಾಶಯ ತಿಳಿಸಿದರು.
ಕೆಆರ್ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ಯೋಗಾಭ್ಯಾಸವನ್ನು ಮಾಡುವುದರಿಂದ ಆರೋಗ್ಯವಾಗಿದ್ದೇನೆ. ಅದೇ ರೀತಿ ಜನರು ಕೂಡ ಯೋಗ ಮಾಡಿ ಆರೋಗ್ಯ ಕಾಪಾಡಿಕೊಂಡು ರೋಗಮುಕ್ತ ದೇಶ ಕಟ್ಟಲು ಜೈಜೋಡಿಸಬೇಕೆಂದು ಕರೆ ನೀಡಿದರು.
ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮೊದಲಿಗೆ ಯೋಗ ನೃತ್ಯ ಮಕ್ಕಳಿಂದ ಯೋಗ ಪ್ರದರ್ಶನ ಹಾಗೂ ಯೋಗ ವಿನ್ಯಾಸ ಪ್ರದರ್ಶನಗಳಿದ್ದವು. ಬಳಿಕ ಯೋಗ ಗಂಗೋತ್ರಿ ಸಂಸ್ಥೆಯ ಯೋಗಗುರು ಡಾ.ಎನ್.ಆರಾಧ್ಯ ಗುರೂಜಿಯವರು ಕೇಂದ್ರ ಸರಕಾರದ ಆಯುಷ್ ಇಲಾಖೆ ಸಿದ್ಧಪಡಿಸಿದ ಶಿಷ್ಟಾಚಾರ ಪದ್ಧತಿಯ ಯೋಗಕ್ರಮಗಳ ಅಭ್ಯಾಸವನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ಗುರೂಜಿಯವರು ಯೋಗಗಂಗೋತ್ರಿ ಸಂಸ್ಥೆಯಿಂದ ನಡೆಸಲಾಗುತ್ತಿರುವ ಆನ್ಲೈನ್ ತರಗತಿಗಳಿಗೆ ಸೇರಿ ಉತ್ತಮ ಆರೋಗ್ಯ ಹೊಂದಬೇಕು ಎಂದು ಕರೆ ಕೊಟ್ಟರು.
ಈ ಕಾರ್ಯಕ್ರಮವು ‘ನೀಲು ಆರಾಧ್ಯ’ ಹಾಗೂ ‘ಯೋಗಗಂಗೋತ್ರಿ’ಯ ಫೇಸ್ಬುಕ್ ಪೇಜ್ನಲ್ಲಿ ನೇರ ಪ್ರಸಾರವಾಗಿದ್ದು, ಸಾರ್ವಜನಿಕರು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8884646108, 8431499898, 9845645230 ಹಾಗೂ ಫೇಸ್ಬುಕ್ ಲೈವ್: ನೀಲು ಆರಾಧ್ಯ, ಯೋಗ ಗಂಗೋತ್ರಿ ಸಂಪರ್ಕಿಸಬಹುದು.