ಎಂ ಆರ್ ಪಿ ಎಲ್, ಬೃಹತ್ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ದ.ಕ. ಯುವ ಜೆಡಿಎಸ್ ನಿಂದ ಮನವಿ

ಮಂಗಳೂರು : ಎಂ ಆರ್ ಪಿ ಎಲ್ ಸೇರಿದಂತೆ ಕೆಲವು ಬೃಹತ್ ಕಂಪೆನಿಗಳಲ್ಲಿ ಸ್ಥಳೀಯ ತುಳುನಾಡಿನ ಯುವಕರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಬುಧವಾರ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 2800 ಎಕ್ರೆ ಸ್ಥಳವನ್ನು ಪಡೆದು ದೊಡ್ಡ ಕಂಪೆಯನಿಯಾಗಿ ಬೆಳೆದಿದ್ದು ಇಲ್ಲಿನ ತುಳುನಾಡಿನ ಯುವಕರಿಗೆ ಕೆಲಸ ನೀಡದೆ ಪ್ರಾದೇಶಿಕತೆಯ ಭಾವನೆಗೆ ಧಕ್ಕೆಯಾಗುತ್ತಿದೆ. ತುಳುನಾಡಿನ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಈಗಾಗಲೇ ಒಮ್ಮೆ ನಾನು ಟ್ವೀಟ್ ಮೂಲಕ ಆಗ್ರಹಿಸಿದ್ದಾಗ ಇಲ್ಲಿನ ಜನಪತ್ರಿನಿಧಿಗಳು ಶೀಘ್ರವೇ ಸಿಹಿ ಸುದ್ದಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಇತ್ತೀಚೆಗೆ 230 ಮಂದಿಯ ಕೆಲಸಗಾರರನ್ನು ತೆಗೆದುಕೊಳ್ಳುವಾಗ ಕೇವಲ 4 ಮಂದಿಯನ್ನು ಮಾತ್ರ ಪರಿಗಣನೆ ಮಾಡಲಾಗಿದೆ.
ನಮ್ಮ ಪಕ್ಷ ಸದಾ ತುಳುನಾಡಿನ ಯುವಕರ ಜೊತೆ ಇರುವುದನ್ನು ದೃಢೀಕರಿಸುವ ನಿಟ್ಟಿನಲ್ಲಿ ಇಂದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಇದು ಯಾವುದೇ ರಾಜಕೀಯ ಬಣ್ಣ ಕಟ್ಟುವುದಕ್ಕಾಗಿ ಭಾಗವಹಿಸಿಲ್ಲ. ನಮ್ಮಿಂದ ಭೂಮಿ ಮಾತ್ರ ಪಡೆದು ನಮ್ಮ ತುಳುನಾಡಿನ ಭಾಗದ ಜನರಿಗೆ ಉದ್ಯೋಗ ಸೃಷ್ಟಿಸದೆ ಹೋದರೆ ಏನು ಪ್ರಯೋಜನ ? ಜಮೀನು ಪಡೆದುಕೊಂಡವರಿಗೆ ಆರ್ಥಿಕವಾಗಿ ಶಕ್ತಿ ತುಂಬಿಸುವ ಕೆಲಸ ಬೃಹತ್ ಕಂಪೆನಿಗಳು ಮಾಡಬೇಕಾಗಿದೆ. ಈ ವಿಚಾರದಲ್ಲಿ ಸಂಸತ್ತಿನಲ್ಲಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿ ತುಳುನಾಡಿನ ಯುವಕರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಯತ್ನಿಸುವ ಕೆಲಸ ಮಾಡುವೆ. ಎರಡು ಮೂರು ವಾರದ ಒಳಗೆ ಸೂಕ್ತ ನ್ಯಾಯ ಒದಗಿಸಲು ಕಂಪೆನಿ ವಿಫಲವಾದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ತುಳುನಾಡಿನ ಯುವಕರಿಗೆ ಉದ್ಯೋಗ ಲಭಿಸಬೇಕು ಎನ್ನುವ ಹೋರಾಟದಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದು ಇಂದು ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಗಿದೆ ಮುಂದಿನ ದಿನಗಳಲ್ಲಿ ತುಳುನಾಡಿನ ಯುವಕರಿಗೆ ನ್ಯಾಯ ದೊರೆಯದೇ ಹೋದಲ್ಲಿ ಬೃಹತ್ ಮಟ್ಟದ ಹೋರಾಟಕ್ಕೆ ಸಿದ್ದ ಎಂದರು.
ದ.ಕ. ಜಿಲ್ಲೆಯ ಜನತಾದಳ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಞಿ, ಪಕ್ಷದ ಹಿರಿಯ ಮುಖಂಡರಾದ ಎಂ.ಬಿ. ಸದಾಶಿವ ಮತ್ತು ನಾಯಕರುಗಳಾದ ಶುಶಿಲ್ ನರೊನ್ಹ, ರತ್ನಾಕರ ಸುವರ್ಣ, ವಸಂತ್ ಪೂಜಾರಿ, ಪುಷ್ಪರಾಜನ್ ಎನ್ ಪಿ, ಅಝೀಝ್ ಕುದ್ರೋಳಿ, ಸುಮತಿ ಹೆಗ್ಡೆ, ನಾಸೀರ್ ಯಾದ್ಗಾರ್ ಹಾಗು ಯುವ ನಾಯಕರುಗಳಾದ ರತೀಶ್ ಕರ್ಕೇರ, ಹಿತೇಶ್ ರೈ, ಫೈಝಲ್ ರೆಹಮಾನ್, ಸತ್ಯ ನಾರಾಯಣ್, ಫೈಝಲ್ ಮೊಹಮ್ಮದ್, ಸತ್ತಾರ್ ಬಂದರ್, ಸವಾಝ್ ಬಂಟ್ವಾಳ, ಪ್ರದೀಪ್ ಪಾಲ್ಗೊಂಡಿದ್ದರು.






.jpeg)
.jpeg)

.jpeg)

.jpeg)



