ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಎಸ್ಐಓ ಆಗ್ರಹ
ಉಡುಪಿ, ಜೂ. 23: ಕೋವಿಡ್ ಎರಡನೆ ಅಲೆಯು ದೇಶಾಧ್ಯಂತ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದು, ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿಗೆ ಸರಕಾರ ಶೀಘ್ರವೇ ಪರಿಹಾರ ಒದಗಿಸಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗ ನೈಸೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಐಓ ಕ್ಯಾಂಪಸ್ ಕಾರ್ಯದರ್ಶಿ ಡಾ.ಫಹೀಮ್ ಹೂಡೆ, ಖಾಸಗಿ ಶಾಲೆಗಳು ಶಿಕ್ಷಕರಿಗೆ ಸಂಬಳ ಕೊಡದೆಯಿರುವ ಈ ಸಂದರ್ಭದಲ್ಲಿ ಸರಕಾರ ಸೂಕ್ತ ಪರಿಹಾರವನ್ನು ಪ್ರತಿ ತಿಂಗಳು ನೀಡಬೇಕು. ಕೆಲವು ಖಾಸಗಿ ಶಾಲೆಗಳು ಕೋವಿಡ್ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲಸದಿಂದ ವಜಾಗೊಳಿಸುವಂತಹ ಅಮಾನವೀಯ ಕೆಲಸಗಳನ್ನು ಮಾಡುತ್ತಿದ್ದು ಸರಕಾರ ಮಧ್ಯ ಪ್ರವೇಶಿಸಿ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸರಕಾರ ಆನ್ಲೈನ್ ಶಿಕ್ಷಣ ಆರಂಭಿಸುವ ಮುನ್ನ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣಕ್ಕೆ ಬೇಕಾಗಿರುವ ಮೊಬೈಲ್ ಮತ್ತು ನೆಟ್ವರ್ಕ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಸರಕಾರ ಶಾಲಾ ಮಕ್ಕಳಿಗೆ ಒದಗಿಸುವ ಪಠ್ಯ ಪುಸ್ತಗಳನ್ನು ಸೂಕ್ತ ಸಮಯಕ್ಕೆ ಒದಗಿಸಬೇಕು. ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿರುವುದು ಕಂಡುಬರುತ್ತಿದೆ. ಸರಕಾರ ಈ ಬಗ್ಗೆ ಸರ್ವೆ ನಡೆಸಿ ಒಂದು ಮಗುವು ಕೂಡ ಶಿಕ್ಷಣ ವಂಚಿತರಾಗದಂದತೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಎಸ್ಐಓ ಜಿಲ್ಲಾಧ್ಯಕ್ಷ ಅರ್ಬಾಝ್ ಅಹಮದ್, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಅಫ್ವಾನ್ ಬಿ.ಹೂಡೆ, ಮಲ್ಪೆ ಸ್ಥಾನೀಯ ಅಧ್ಯಕ್ಷ ಅಯಾನ್ ಮಲ್ಪೆ, ಹೂಡೆ ಸ್ಥಾನೀಯ ಅಧ್ಯಕ್ಷ ವಸೀಮ್ ಗುಜ್ಜರಬೆಟ್ಟು ಉಪಸ್ಥಿತರಿದ್ದರು.







