ದ.ಕ.ಜಿಲ್ಲೆಯಲ್ಲಿ ಜುಲೈ 1ರಿಂದ ಸಿಟಿ, ಸರ್ವಿಸ್ ಬಸ್ ಸಂಚಾರ: ಬಸ್ ಮಾಲಕರ ಸಂಘ

ಫೈಲ್ ಫೋಟೊ
ಮಂಗಳೂರು, ಜೂ. 24: ದ.ಕ. ಜಿಲ್ಲೆಯಲ್ಲಿ ಜುಲೈ 1ರಿಂದ ಸಿಟಿ ಮತ್ತು ಸರ್ವಿಸ್ ಬಸ್ಗಳು ಸಂಚಾರ ಆರಂಭಿಸಲಿದೆ ಎಂದು ಕೆನರಾ ಬಸ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ತಿಳಿಸಿದ್ದಾರೆ.
‘ಸರಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸಲು ಸಾಧ್ಯವಿಲ್ಲ. ಬಸ್ಸಿನಲ್ಲಿರುವ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ನಮಗೆ ಯಾವುದೇ ಆದಾಯ ಲಭಿಸದು. ಈಗಾಗಲೆ ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರಯಾಣ ದರ ಹೆಚ್ಚಿಸುವಂತೆ ಕೇಳುವುದು ಕೂಡ ಸದ್ಯದ ಸ್ಥಿತಿಯಲ್ಲಿ ಸಮಂಜಸವಲ್ಲ. ನಾವು ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದೆವು. ಅದನ್ನು ಈಡೇರಿಸಿಲ್ಲ. ಆದಾಗ್ಯೂ ಜು.1ರಿಂದ ಪರಿಸ್ಥಿತಿಯನ್ನು ಗಮನಿಸಿ ಬಸ್ಗಳನ್ನು ರಸ್ತೆಗೆ ಇಳಿಸಲಿದ್ದೇವೆ’ ಎಂದು ದಿಲ್ರಾಜ್ ಆಳ್ವ ತಿಳಿಸಿದ್ದಾರೆ.
’ಸರಕಾರ ನಮ್ಮ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ. ಆದಾಗ್ಯೂ ಬಸ್ ಸಾರಿಗೆ ಉದ್ಯಮದ ಭವಿಷ್ಯದ ಹಿತದೃಷ್ಟಿಯಿಂದ ಜುಲೈ 1ರಿಂದ ಬಸ್ ಸಂಚಾರ ಆರಂಭಿಸಲು ಮುಂದಾಗಿದ್ದೇವೆ. ಈಗಾಗಲೆ ಬಸ್ ಚಾಲಕರು, ನಿರ್ವಾಹಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಮಾಲಕರು ಕೂಡ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ (ಇಂದು) ಗುರುವಾರ ವಿಸ್ತೃತ ಚರ್ಚೆ ನಡೆಸಿ ಬಸ್ ಸಂಚಾರದ ಬಗ್ಗೆ ನಿರ್ಧರಿಸಿದ್ದೇವೆ ಎಂದು ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.





