ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಜೂ. 24: `ಲಸಿಕೆಯೊಂದರಿಂದಲೇ ಕೊರೋನ ಸೋಂಕಿನಿಂದ ದೂರವಿರಲು ಸಾಧ್ಯ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಎರಡೂ ಡೋಸ್ ಲಸಿಕೆಯನ್ನು ರಾಜ್ಯ ಸರಕಾರ ನೀಡಲಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಗುರುವಾರ ರಾಜ್ಯ ವಕೀಲರ ಪರಿಷತ್ತಿನಲ್ಲಿ ಕೋವಿಡ್-19 ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಕರ್ನಾಟಕ ರಾಜ್ಯದ ಸಮಸ್ತ ಜನರಿಗೆ ಎರಡೂ ಡೋಸ್ ಲಸಿಕೆ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ. ಲಸಿಕೆಯೊಂದರಿಂದಲೇ ನಾವು ಕೊರೋನ ಸೋಂಕಿನಿಂದ ದೂರವಿರಲು ಸಾಧ್ಯ. ಇಲ್ಲದಿದ್ದರೆ ಯಾವಾಗಲೂ ಮಾಸ್ಕ್ ಧರಿಸಿಕೊಂಡೇ ಇರಬೇಕಾಗುತ್ತದೆ. ಮಾಸ್ಕ್ ಬಿಟ್ಟು ಮುಕ್ತವಾಗಿ ಮೊದಲಿನಂತೆ ಇರುವ ಸ್ಥಿತಿ ಬರಲು ಎಲ್ಲರೂ ಲಸಿಕೆ ಪಡೆಯಬೇಕು' ಎಂದು ಸಲಹೆ ಮಾಡಿದರು.
`ಕೋವಿಡ್ ಎರಡನೆ ಅಲೆಯಲ್ಲಿ ನಿರೀಕ್ಷೆಗೆ ಮೀರಿ ಸೋಂಕು ಹೆಚ್ಚಿದ್ದರೂ, ಸರಕಾರದ ಕ್ರಮಗಳಿಂದ ಸಾವಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಸೋಂಕು ನಿಯಂತ್ರಣಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲೇ ವೈದ್ಯರ ನೇರ ನೇಮಕ ಆಗಿರಲಿಲ್ಲ. ಗ್ರಾಮೀಣ ಪ್ರದೇಶದ ಆಸ್ಪತ್ರೆ, ಜಿಲ್ಲಾಸ್ಪತ್ರೆಗಳವರೆಗೂ ಖಾಲಿ ಇರುವ 1,760 ವೈದ್ಯ, ವೈದ್ಯಾಧಿಕಾರಿ ಹುದ್ದೆಗಳನ್ನು ತುಂಬಲಾಗಿದೆ' ಎಂದು ಸುಧಾಕರ್ ತಿಳಿಸಿದರು.
`ಕೋವಿಡ್ ಮೂರನೆ ಅಲೆಗೆ ಸಂಬಂಧಿಸಿದಂತೆ ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ನೀಡಿದ ವರದಿಯ ಶಿಫಾರಸು ಆಧರಿಸಿ ಜಿಲ್ಲಾಮಟ್ಟದಲ್ಲಿ ಆರೋಗ್ಯ ಸೌಕರ್ಯ ಬಲಪಸಲಾಗುತ್ತಿದೆ. ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಅದನ್ನೇ ಜನರು ಬೇಗ ನಂಬುತ್ತಿದ್ದಾರೆ. ಆದರೆ, ಸರಕಾರ ನೀಡುವ ಅಂಕಿ-ಅಂಶಗಳನ್ನು ನಂಬಬೇಕು. ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದಾಗ ಅದನ್ನು ನಂಬಲು ಹಲವು ವರ್ಷಗಳೇ ಬೇಕಾಯಿತು. ಹೆಪಟೈಟಿಸ್ `ಬಿ' ಲಸಿಕೆ ಆವಿಷ್ಕಾರವಾದರೂ ಭಾರತಕ್ಕೆ ಬರಲು 20 ವರ್ಷ ಬೇಕಾಯಿತು. ಆದರೆ, ಕೋವಿಡ್ ಆರಂಭವಾದ ಬಳಿಕ ಬೇಗ ಲಸಿಕೆ ದೊರೆತಿದೆ' ಎಂದು ಸುಧಾಕರ್ ತಿಳಿಸಿದರು.
`ಇದು ವಿದೇಶದ್ದಾಗಿರದೆ, ದೇಶೀಯವಾಗಿಯೇ ತಯಾರಾಗಿರುವುದು ಹೆಮ್ಮೆಯ ವಿಚಾರ. ಅತ್ಯಂತ ಪರಿಣಾಮಕಾರಿಯಾದ ಈ ಲಸಿಕೆಗಳನ್ನು ಎಲ್ಲರೂ ಪಡೆಯಬೇಕು. ವಿದೇಶದ ಲಸಿಕೆಗಳು ಹೆಚ್ಚು ದರ ಹೊಂದಿವೆ. ಆದರೆ, ನಮ್ಮ ದೇಶದ ಲಸಿಕೆಗಳನ್ನು ಪ್ರಧಾನಿ ಮೋದಿಯವರು ಸಂಪೂರ್ಣ ಉಚಿತವಾಗಿ ನೀಡಿದ್ದಾರೆ. ಲಸಿಕೆಯ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಂಡು ಜನರಿಗೆ ಉತ್ತಮ ಸಂದೇಶ ನೀಡಬೇಕು' ಎಂದು ಅವರು ಹೇಳಿದರು.
`ರಾಜ್ಯದಲ್ಲಿರುವ ಸುಮಾರು 1ಲಕ್ಷ ವಕೀಲರು ಹಾಗೂ ಅವರ ಕುಟುಂಬ ಸದಸ್ಯರಿಗೆ ಪ್ರಾಶಸ್ತ್ಯದಲ್ಲಿ ಕೋವಿಡ್ ಲಸಿಕೆ ನೀಡಲು ರಾಜ್ಯ ಸರಕಾರ ಕ್ರಮ ವಹಿಸಿದೆ. ಹೆಚ್ಚು ಜನರ ಸಂಪರ್ಕ ಇರುವ ವೃತ್ತಿಪರರಿಗೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ಸೋಂಕಿನಿಂದ ಪಾರಾಗಲು ಸಾಧ್ಯ' ಎಂದು ಸುಧಾಕರ್ ಸಲಹೆ ನೀಡಿದರು.







