1 ಲಕ್ಷ ಮನೆ ಮಂಜೂರಾತಿಗಾಗಿ ಬುಧವಾರದಿಂದ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭ: ಸಚಿವ ವಿ.ಸೋಮಣ್ಣ
''ಆಗಸ್ಟ್ 15ಕ್ಕೆ ಸಿಎಂ ಬಿಎಸ್ವೈ ಅವರಿಂದ 5 ಸಾವಿರ ಮನೆ ವಿತರಣೆ''

ಬೆಂಗಳೂರು, ಜೂ. 25: `ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲು ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ಮಾಣ ಮಾಡುತ್ತಿರುವ 1 ಲಕ್ಷ ಬಹುಮಹಡಿ ಮನೆಗಳ ಮಂಜೂರಾತಿಗೆ ಸಂಬಂಧಿಸಿದಂತೆ ಮುಂದಿನ ಬುಧವಾರದಿಂದ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಆ.15ರಂದು ಸಿಎಂ ಯಡಿಯೂರಪ್ಪನವರು 5 ಸಾವಿರ ಮನೆಗಳನ್ನು ವಿತರಿಸಲಿದ್ದಾರೆ' ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ 1 ಲಕ್ಷ ಬಹುಮಹಡಿ ಮನೆಗಳ ಯೋಜನೆಯ ಅನುಷ್ಠಾನ ಕುರಿತಂತೆ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೀಮಿತವಾಗಿದ್ದ ಸೌಲಭ್ಯವನ್ನು ಬೆಂಗಳೂರು ನಗರ ಜಿಲ್ಲೆಗೆ ವಿಸ್ತರಿಸಲಾಗಿದ್ದು, ವಾರ್ಷಿಕ ಆದಾಯದ ಮಿತಿಯನ್ನು 87,600 ರೂ.ಗಳಿಂದ 3 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದರು.
ಈ ಹಿಂದೆ ನಗರದಲ್ಲಿ ಒಂದಿಂಚು ಭೂಮಿಯನ್ನು ಹೊಂದದೆ, ಮನೆಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿತ್ತು, ಹೀಗಾಗಿ ಈ ಹಿಂದೆ ಸ್ವೀಕರಿಸಿದ್ದ ಅರ್ಜಿಗಳನ್ನು ರದ್ದುಪಡಿಸಿ, ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಈ ಹಿಂದೆ ಅರ್ಜಿ ಸಲ್ಲಿಸಿದ್ದವರು ಈಗ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಪ್ರಧಾನಿ ಮೋದಿಯವರ ಆಶಯದಂತೆ ಬಡವರಿಗೆ ಮನೆಗಳನ್ನು ವಿತರಿಸುವ ಈ ಯೋಜನೆಗಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಇನ್ನಿತರ ಸರಕಾರಿ ಸಂಸ್ಥೆಗಳಿಂದ 515 ಎಕರೆ ಭೂಮಿಯನ್ನು ಪಡೆಯಲಾಗಿದೆ. ಮೊದಲ ಹಂತದಲ್ಲಿ 46,998 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು, 42,361 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, 2022ರ ನವೆಂಬರ್ ವೇಳೆಗೆ 80 ಸಾವಿರ ಮನೆಗಳನ್ನು ನಿರ್ಮಿಸಿ ಅರ್ಹರಿಗೆ ವಿತರಿಸಲಾಗುವುದು ಎಂದು ವಿ.ಸೋಮಣ್ಣ ಮಾಹಿತಿ ನೀಡಿದರು.
ಮನೆ ನಿರ್ಮಾಣ ಹಾಗೂ ವಿತರಣೆ ಕಾರ್ಯ ಅತ್ಯಂತ ಪಾರದರಶಕವಾಗಿ ನಡೆಯುತ್ತಿದ್ದು, ವಾಸ ಮಾಡಲು ಮನೆಯನ್ನು ಹೊಂದಿರದ ಬಡವರು ಹಾಗೂ ಆಶಕ್ತರು ಸ್ವಂತ ಸೂರು ಹೊಂದಬೇಕೆಂಬುದೆ ತಮ್ಮ ಬದ್ಧತೆಯಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್, ಮುಖ್ಯ ಇಂಜಿನಿಯರುಗಳು, ಹಾಗೂ ಅಧಿಕಾರಿಗಳು ಹಾಜರಿದ್ದರು.
ಗುತ್ತಿಗೆದಾರರು ಯಾವುದೇ ಕಾರಣಕ್ಕೂ ವಿಳಂಬ ನೀತಿ ಅನುಸರಿಸಲು ಅವಕಾಶವಿಲ್ಲ. ಅವರು ಎಷ್ಟೇ ದೊಡ್ಡವರಾಗಿದ್ದರೂ ಅವರ ಆಟ ನಡೆಯುವುದಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಪ್ರತಿ 15 ದಿನಕ್ಕೆ ಒಮ್ಮೆ ಕಾಮಗಾರಿ ಖುದ್ದು ಪರಿಶೀಲನೆ ಮಾಡಬೇಕು. 30 ದಿನದಲ್ಲಿ ಪರಿಶೀಲನೆ ಜತೆ ಕೆಲಸವನ್ನು ಮಾಡಬೇಕು. ಬಡವರ ಪರವಾಗಿ ಬದ್ಧತೆಯಿಂದ ಕೆಲಸ ಮಾಡಬೇಕು. ಅವರಿಗೆ ತ್ವರಿತಗತಿಯಲ್ಲಿ ಮನೆ ಒದಗಿಸಲು ಕ್ರಮ ವಹಿಸಬೇಕು'
-ವಿ.ಸೋಮಣ್ಣ, ವಸತಿ ಸಚಿವ







