ಡ್ರಗ್ಸ್ ಮುಕ್ತ ಮಂಗಳೂರಿಗೆ ಸಹಕರಿಸಿ: ಕಮಿಷನರ್ ಶಶಿಕುಮಾರ್
ಮಂಗಳೂರು, ಜೂ. 26: ಡ್ರಗ್ಸ್ ವ್ಯಸನ ಮರಕ್ಕೆ ಅಂಟಿಕೊಂಡ ಗೆದ್ದಲಿನಂತೆ. ಗೆದ್ದಲು ಒಳಗೊಳಗೇ ಮರವನ್ನು ತಿನ್ನುತ್ತಾ ಸಾಗುವಂತೆ ಡ್ರಗ್ಸ್ ವ್ಯಸನವೂ ಹೊರಗಡೆ ನೋಡಲು ಸಿಗದಿದ್ದರೂ, ಅದನ್ನು ಅನುಭವಿಸಿದವರಿಗೆ ಮಾತ್ರವೇ ಗೊತ್ತಿರುತ್ತದೆ. ಡ್ರಗ್ಸ್ ವಿರುದ್ಧ ಶೂನ್ಯ ಸಹಿಷ್ಣುತೆ ನಮ್ಮ ಧ್ಯೇಯವಾಗಿದ್ದು, ಡ್ರಗ್ಸ್ ಮುಕ್ತ ಮಂಗಳೂರು ಮಾಡುವಲ್ಲಿ ಇಲಾಖೆ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಜನರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ನಿಷೇಧಿತ ಮಾದಕ ದ್ರವ್ಯಗಳ ಸೇವನೆ, ಪೂರೈಕೆಗೆ ಸಂಬಂಧಿಸಿ ಏನೇ ಮಾಹಿತಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಅವರು ಈ ಸಂದರ್ಭ ಸಾರ್ವಜನಿಕರಿಗೆ ಮನವಿ ಮಾಡಿದರು.
ಇಂದು ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ದಿನಾಚರಣೆಯಾಗಿದ್ದು, ಕರ್ನಾಟಕಾದ್ಯಂತ ಡಿಜಿಪಿ ಪ್ರವೀಣ್ ಸೂದ್ ರವರ ನಿರ್ದೇಶನದ ಮೇರೆಗೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿರುವ, ವಿಲೇ ಆಗದಿರುವ ಎಲ್ಲಾ ಮಾದಕ ದ್ರವ್ಯಗಳನ್ನು ವಿಲೇ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ನ್ಯಾಯಾಲಯದಲ್ಲಿ ಇತ್ಯರ್ಥ ಆಗಿರುವ ಪ್ರಕರಣಗಳಲ್ಲಿ ಹಾಗೂ ತನಿಖೆಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿ ಇಲಾಖೆಯ ಡ್ರಗ್ಸ್ ವಿಲೇ ಸಮಿತಿಯ ನಿರ್ಧಾರದಂತೆ, ನ್ಯಾಯಾಲಯ ಹಾಗೂ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯೊಂದಿಗೆ ಡ್ರಗ್ಸ್ ವಿಲೇ ಕಾರ್ಯವನ್ನು ಮಂಗಳೂರು ನಗರದ ಹೊರವಲಯದ ಮುಲ್ಕಿ ಎಂಬಲ್ಲಿ ನಡೆಸಲಾಗುತ್ತಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು 50 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿರುವ 130ಕಿ.ಗ್ರಾಂ.ಗೂ ಅಧಿಕ ಪ್ರಮಾಣದ ಗಾಂಜಾ, 68 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್ಗಳು, 41ಸ್ಟ್ರಿಪ್ ಎಲ್ಎಸ್ಡಿ, ಅದರ ಜತೆ ಕೊಕೇನ್ ಹಾಗೂ ಬ್ರೌನ್ ಶುಗರ್ ತಲಾ 18 ಎಂಎಲ್ ಸೇರಿದಂತೆ ಮಾದಕ ದ್ರವ್ಯಗಳನ್ನು ಇಂದು ವಿಲೇ ಮಾಡಲಾಗುತ್ತಿದೆ ಎಂದವರು ಹೇಳಿದರು.
ನಗರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳನ್ನು ಪತ್ತೆಹಚ್ಚಿರುವುದಲ್ಲದೆ, ಪ್ರಮುಖ ಆರೋಪಿಗಳನ್ನೂ ಬಂಧಿಸಲಾಗಿದೆ. ಈ ವರ್ಷದಲ್ಲಿ ಡ್ರಗ್ಸ್ ಮಾರಾಟ, ಸೇವನೆ ಹಾಗೂ ಪೂರೈಕೆಗೆ ಸಂಬಂಧಿಸಿ 214ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. 300ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿದ್ದು ಕೊಂಡು ಡ್ರಗ್ಸ್ ವ್ಯವಹಾರ ಮಾಡುತ್ತಿದ್ದ ನೈಜೀರಿಯಾ ಪ್ರಜೆ, ಒಮನ್ ಪ್ರಜೆ ಹಾಗೂ ಕೇರಳದ ಹಲವು ಜಿಲ್ಲೆ ಹಾಗೂ ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಕೇರಳದ ಆರೋಪಿಯನ್ನೂ ಇತ್ತೀಚೆಗೆ ಬಂಧಿಸಲಾಗಿದೆ. ಸಮಾಜವನ್ನು ಡ್ರಗ್ಸ್ ಮುಕ್ತ ಮಾಡುವಲ್ಲಿ ನಾವೆಲ್ಲಾ ಸಂಕಲ್ಪ ಮಾಡೋಣ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕರೆ ನೀಡಿದರು.