ಸಾವಿರಾರು ಜನರ ಕಗ್ಗೊಲೆಗೆ ಕಾರಣರಾದವರಿಗೆ ತುರ್ತು ಪರಿಸ್ಥಿತಿಯನ್ನು ಟೀಕಿಸುವ ಹಕ್ಕಿಲ್ಲ : ಬಿ.ಕೆ. ಹರಿಪ್ರಸಾದ್

ಬೆಂಗಳೂರು : 2002ರಲ್ಲಿ ಗುಜರಾತಿನ ಗೋಧ್ರಾ ಮಾರಣ ಹೋಮಕ್ಕೆ ಕಾರಣರಾಗಿ, ಸಾವಿರಾರು ಮುಗ್ಧ ಅಮಾಯಕರ ಕಗ್ಗೊಲೆ ಮತ್ತು 5000 ಕೋಟಿ ರೂ. ನಷ್ಟಕ್ಕೆ ಕಾರಣರಾದವರಿಗೆ ತುರ್ತು ಪರಿಸ್ಥಿತಿಯನ್ನು ಟೀಕಿಸಲು ಹಕ್ಕಿಲ್ಲ. ವಿಕೃತ ಆನಂದವನ್ನು ಅನುಭವಿಸುವವರಿಗೆ ಗುಜರಾತಿನ ಹಿರಿಯ ಪೊಲೀಸ್ ಅಧಿಕಾರಿ ಡಿ.ಜಿ. ವೆಂಝಾರ ಅವರು ಹೇಳಿದ "ಗುಜರಾತಿನ ಸಬರ್ಮತಿ ಜೈಲಿನಲ್ಲಿರಬೇಕಾದವರು ಭಾರತವನ್ನು ಆಳುತ್ತಿದ್ದಾರೆ ಎಂಬ ಮಾತುಗಳನ್ನು ನೆನಪಿಸಬೇಕಾಗಿದೆ.
ಅಮೆರಿಕದ ಪ್ರಭಾವಿ ವಿದೇಶಾಂಗ ಸಚಿವ ಹೆನ್ರಿ ಕಿಸ್ಟಿಂಗರ್, ತಮ್ಮ ಆತ್ಮ ಚರಿತ್ರೆಯಲ್ಲಿ ಇಂದಿರಾಗಾಂಧಿ ಅವರನ್ನು ಹೊಗಳುತ್ತಾ" ಇಂದಿರಾಗಾಂಧಿ ಒಬ್ಬ ಧೈರ್ಯ ಶಾಲಿ ಮತ್ತು ಚಾಣಾಕ್ಷ ನಾಯಕಿ ಎಂದು ಬಣ್ಣಿಸಿದ್ದರು. ಈ ಇಂದಿರಾಗಾಂಧಿಯವರು ಪಾಕಿಸ್ತಾನವನ್ನು ಇಬ್ಭಾಗ ಮಾಡಿ, ಭವಿಷ್ಯದ ಪೀಳಿಗೆಗೆ ಆದರ್ಶರಾಗಿದ್ದಾರೆ. ಇವರು ಭಾರತವನ್ನು ಅಣುಶಕ್ತಿಯ ರಾಷ್ಟ್ರವನ್ನಾಗಿ ಮಾಡಿದ್ದಲ್ಲದೆ, ಆಹಾರ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಮಾಡಿದರು.
ಬಿಜೆಪಿ ಸರ್ಕಾರಗಳ ಕೊಡುಗೆ ಶೂನ್ಯ
ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ಟೀಕಿಸುವ ಬಿಜೆಪಿ ನಾಯಕರ ಸರ್ಕಾರ ಈಗ ಅಘೋಷಿತ ತುರ್ತುಪರಿಸ್ಥಿತಿಯನ್ನು ಬೆಳಸಿ ರಾಜಕೀಯ ವಿರೋಧಿಗಳನ್ನು ಹಣಿಸಲು ಅವರ ಮೇಲೆ ಸಿಬಿಐ, ಐಟಿ, ಇಡಿ ಛೂ ಬಿಟ್ಟು ಸದಬಡಿಯುತ್ತಿದೆ.
ಈ ದಮನಕಾರಿ ಸರ್ಕಾರ ವಿರೋಧ ಪಕ್ಷಗಳ ಸರ್ಕಾರಗಳನ್ನು ಹೆದರಿಸಿ, ಆಮಿಷಗಳಿಂದ, ಪಕ್ಷಾಂತರ ಗಳಿಂದ ಉರುಳಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಸರ್ಕಾರ ವಾಕ್ ಸ್ವಾತಂತ್ರ್ಯಗಳ ಹೋರಾಟಗಾರರನ್ನು ಜೈಲಿನಲ್ಲಿರಿಸಿ ವೃದ್ಧರು, ನಿಶ್ಯಕ್ತಿಯಿಂದ ನರಳುವವರಿಗೂ ಸಾಧಾರಣ ವೈದ್ಯಕೀಯ ನೆರವನ್ನೂ ಕೊಡದೆ ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಇವರಿಗೆ ತುರ್ತು ಪರಿಸ್ಥಿತಿಯನ್ನು ಟೀಕಿಸುವ ಅರ್ಹತೆ ಇದೆಯೇ ? ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನುಚ್ಚು ನೂರು ಮಾಡುತ್ತಿರುವ ಫ್ಯಾಸಿಸ್ಟರು ಇಂದಿರಾಗಾಂಧಿಯವರನ್ನು ಟೀಕಿಸುವ ಅಧಿಕಾರ, ಅರ್ಹತ ಕಳೆದುಕೊಂಡಿದ್ದಾರೆ.
ಬಿ.ಕೆ. ಹರಿಪ್ರಸಾದ್,
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.








