ಗೋವಿನ ಕುರಿತು ಪೋಸ್ಟ್ ಮಾಡಿದ್ದಕ್ಕಾಗಿ 45 ದಿನಗಳಿಂದಲೂ ಜೈಲಿನಲ್ಲಿ ಕೊಳೆಯುತ್ತಿರುವ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ

ಇಂಫಾಲ,ಜೂ.27: ‘ಹಸುವಿನ ಸೆಗಣಿ ಮತ್ತು ಮೂತ್ರ ಕೋವಿಡ್ ಅನ್ನು ಗುಣಪಡಿಸುವುದಿಲ್ಲ’ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಗಳನ್ನು ಹಾಕಿದ್ದಕ್ಕಾಗಿ ದೇಶದ್ರೋಹ ಆರೋಪದಲ್ಲಿ ರಾಷ್ಟ್ರೀಯ ಸುರಕ್ಷತಾ ಕಾಯ್ದೆ (ಎನ್ಎಸ್ಎ)ಯಡಿ ಬಂಧಿತರಾಗಿರುವ ಇಂಫಾಲದ ಪತ್ರಕರ್ತ ಕಿಶೋರ್ ಚಂದ್ರ ವಾಂಗ್ಖೆಮ್ ಮತ್ತು ಸಾಮಾಜಿಕ ಹೋರಾಟಗಾರ ಎರೆಂದ್ರೊ ಲೀಚೊಂಬಾಮ್ ಅವರು ಯಾವುದೇ ವಿಚಾರಣೆಯಿಲ್ಲದೆ ಕಳೆದ 45 ದಿನಗಳಿಂದಲೂ ಇಲ್ಲಿಯ ಸಜಿವಾ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಅವರು ಜಿಲ್ಲಾಧಿಕಾರಿ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ಮನವಿಗಳು ತಿರಸ್ಕೃತಗೊಂಡಿವೆ. ಅವರ ಕುಟುಂಬ ಸದಸ್ಯರು ಕೇಂದ್ರ ಸರಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದು,ಉತ್ತರಕ್ಕಾಗಿ ಕಾಯುತ್ತಿದ್ದಾರೆ. ತಮ್ಮ ಅರ್ಜಿಗಳಿಗೆ ಕೇಂದ್ರವು ಸ್ಪಂದಿಸದಿದ್ದರೆ ಮಣಿಪುರ ಉಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.
ಮೇ 13ರಂದು ವಾಂಗ್ಖೆಮ್ ಮತ್ತು ಲೀಚೊಂಬಾಮ್ ಅವರ ಮನೆಗೆ ನುಗ್ಗಿದ್ದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ತನ್ನ ನಿರ್ಭೀತ ಅಭಿಪ್ರಾಯಗಳಿಗಾಗಿ ವಾಂಗ್ಖೆಮ್ ಹಿಂದೆಯೂ ಹಲವು ಬಾರಿ ಬಂಧಿಲ್ಪಟ್ಟಿದ್ದರಿಂದ ಮನೆಗೆ ಪೊಲೀಸ್ ಅಧಿಕಾರಿಗಳು ನುಗ್ಗಿದ್ದು ಅವರ ಪತ್ನಿ ರಂಜಿತಾಗೆ ಯಾವುದೇ ಆಘಾತವನ್ನುಂಟು ಮಾಡಿರಲಿಲ್ಲ. ಅತ್ತ ಲೀಚೊಂಬಾಮ್ರನ್ನು ಉಟ್ಟ ಬಟ್ಟೆಯಲ್ಲಿಯೇ ಎಳೆದೊಯ್ದಿದ್ದ ಪೊಲೀಸರು ಅವರ ವೃದ್ಧತಾಯಿ ಲಾಂಧೊನಿ ಮೇಲೆ ಹಲ್ಲೆಯನ್ನು ನಡೆಸಿ ನೆಲಕ್ಕೆ ತಳ್ಳಿದ್ದರು. ಇದರಿಂದಾಗಿ 15 ದಿನಗಳ ಕಾಲ ಉಸಿರಾಡುವುದೂ ಆಕೆಗೆ ಕಷ್ಟವಾಗಿತ್ತು.
ಮಣಿಪುರದ ಬಿಜೆಪಿ ನಾಯಕ ಎಸ್.ಟಿಕೇಂದ್ರ ಸಿಂಗ್ ಅವರು ಅನಾರೋಗ್ಯದಿಂದ ನಿಧನರಾಗಿದ್ದ ಸಂದರ್ಭದಲ್ಲಿ ‘ಹಸುವಿನ ಸೆಗಣಿ ಮತ್ತು ಮೂತ್ರ ಕೊರೋನಕ್ಕೆ ಚಿಕಿತ್ಸೆಯಲ್ಲ. ವಿಜ್ಞಾನ ಮತ್ತು ಸಾಮಾನ್ಯ ಪ್ರಜ್ಞೆ ಚಿಕಿತ್ಸೆಯಾಗಿದೆ ’ಎಂದು ಲೀಚೊಂಬಾಮ್ ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರೆ,‘ಹಸುವಿನ ಸೆಗಣಿ ಮತ್ತು ಮೂತ್ರ ಕೆಲಸ ಮಾಡಲಿಲ್ಲ ’ಎಂದು ವಾಂಗ್ಖೆಮ್ ತನ್ನ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದರು.
ಅವರು ಈ ಪೋಸ್ಟ್ ಮಾಡಿದ್ದ ಕೆಲವೇ ನಿಮಿಷಗಳಲ್ಲಿ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮೀತಿ ಪ್ರೇಮಾನಂದ ಮತ್ತು ಥೌಬೈ ಜಿಲ್ಲಾ ಬಿಜೆಪಿ ಅಧ್ಯಕ್ಷ ಯುಮ್ನಾಂ ಕುಮರಜಿತ್ ಸಿಂಗ್ ಅವರು ಇಬ್ಬರ ವಿರುದ್ಧವೂ ದೂರುಗಳನ್ನು ದಾಖಲಿಸಿದ್ದರು.
ಮೇ 17ರಂದು ಇಂಫಾಲದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಇಬ್ಬರಿಗೂ ಜಾಮೀನುಗಳನ್ನು ಮಂಜೂರು ಮಾಡಿದ್ದರು. ಆದರೆ ಈ ಆದೇಶವು ಕಾರ್ಯಗತಗೊಳ್ಳುವ ಮುನ್ನವೇ ಇಂಫಾಲ್ ಪಶ್ಚಿಮ ಜಿಲ್ಲಾಧಿಕಾರಿಗಳು ‘ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವೊಡ್ಡಿದ್ದಾರೆ ’ಎಂಬ ಕಾರಣ ನೀಡಿ ಅವರಿಬ್ಬರ ವಿರುದ್ಧ ಎನ್ಎಸ್ಎ ಹೇರಿದ್ದರು ಮತ್ತು ಪೊಲೀಸರು ಅವರಿಬ್ಬರನ್ನು ಮರುಬಂಧಿಸಿದ್ದರು.
ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಣಿಪುರ ಸರಕಾರವು ಹೇಳುತ್ತಿದೆ. ಪ್ರಕರಣದಲ್ಲಿ ತಥ್ಯವಿರುವುದನ್ನು ಮನಗಂಡು ಜಿಲ್ಲಾಧಿಕಾರಿಗಳು ಅವರ ವಿರುದ್ಧ ಕ್ರಮವನ್ನು ಕೈಗೊಂಡಿದ್ದಾರೆ. ಇಡೀ ವಿಷಯವನ್ನು ಸರಕಾರವು ಗಮನಕ್ಕೆ ತೆಗೆದುಕೊಂಡಿದೆ. ಕಡತವೀಗ ಮುಖ್ಯಮಂತ್ರಿಗಳ ಬಳಿ ಬಾಕಿಯಿದೆ ಎಂದು ಮಣಿಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಬಿಸ್ವಜಿತ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಬಂಧನಗಳು ಮಣಿಪುರದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆಯುತ್ತಿರುವ ದಾಳಿಗಳ ಭಾಗವಾಗಿದೆ ಎಂದು ವರದಿಯು ಹೇಳಿದೆ. ಕೋವಿಡ್ ಬಿಕ್ಕಟ್ಟಿನ ನಿರ್ವಹಣೆಗಾಗಿ ತನ್ನ ವಿರುದ್ಧದ ಟೀಕೆಗಳನ್ನು ಹತ್ತಿಕ್ಕಲು ಮಣಿಪುರದ ಬಿಜೆಪಿ ನೇತೃತ್ವದ ಸರಕಾರವು 2020ರ ಎಪ್ರಿಲ್ ತಿಂಗಳೊಂದರಲ್ಲೇ ದೇಶದ್ರೋಹ ಆರೋಪ ಮತ್ತು ಇತರ ಕಾನೂನುಗಳಡಿ 13 ಪ್ರಕರಣಗಳನ್ನು ದಾಖಲಿಸಿತ್ತು. ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧನಗಳಲ್ಲೂ ಮಣಿಪುರವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಅಲ್ಲಿ 2015 ಮತ್ತು 2019ರ ನಡುವೆ ಈ ಕಾಯ್ದೆಯಡಿ 1,786 ಪ್ರಕರಣಗಳು ದಾಖಲಾಗಿವೆ.
ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ಆಡಳಿತ ಪಕ್ಷದ ಸೂಚನೆಯಂತೆಯೇ ಎಲ್ಲವೂ ನಡೆಯುತ್ತಿದೆ. ವಾಕ್ ಸ್ವಾತಂತ್ರದ ಮೇಲಿನ ದಾಳಿಯು ಪ್ರತಿಯೊಬ್ಬರೂ ತಮ್ಮನ್ನು ತಾವೇ ಸೆನ್ಸಾರ್ಶಿಪ್ ಗೆ ಒಳಪಡಿಸಿಕೊಳ್ಳುವಂತೆ ಮಾಡಿದೆ. ಇಲ್ಲಿ ಈಗ ಪ್ರತೀಕಾರದ ಭಯವಿಲ್ಲದೆ ಮಾತನಾಡುವ ಕೆಲವೇ ಜನರಿದ್ದಾರೆ ಎಂದು ಇಂಫಾಲ್ ನ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ಅಲರ್ಟ್ನ ನಿರ್ದೇಶಕ ಬಬ್ಲೂ ಲೊಯಿಟೊಂಗ್ಬಾಮ್ ಹೇಳಿದರು.
ಮಣಿಪುರದ ಪತ್ರಕರ್ತರಿಗೆ ಪ್ರಭಾವಿ ಜನರು ಮತ್ತು ರಾಜಕಾರಣಿಗಳಿಂದ ಬೆದರಿಕೆಗಳು ಈಗಲೂ ಮುಂದುವರಿದಿವೆ. ಮಾಧ್ಯಮಗಳು ಆಗಾಗ್ಗೆ ಸರಕಾರದ ನಿಯಂತ್ರಣ ಮತ್ತು ಸೆನ್ಸಾರ್ಶಿಪ್ ಎದುರಿಸಬೇಕಿದೆ ಎಂದು ಜಾಗತಿಕ ಎನ್ಜಿಒ ಓಪನ್ ಟೆಕ್ನಾಲಜಿ ಫಂಡ್ಸ್ 2020ರಲ್ಲಿ ನಡೆಸಿದ ಅಧ್ಯಯನವು ಬೆಟ್ಟುಮಾಡಿದೆ.
ಈ ವರ್ಷದ ಮಾರ್ಚ್ ನಲ್ಲಿ ವಾಕ್ ಸ್ವಾತಂತ್ರದ ‘ದುರುಪಯೋಗ ’ದ ವಿರುದ್ಧ ಎಚ್ಚರಿಕೆ ನೀಡಿದ್ದ ಬಿರೇನ್ ಸಿಂಗ್, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಯಾದಾಗ ಕಾನೂನು ತಾನಾಗಿಯೇ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಹೇಳಿದ್ದರು. ವಾಂಗ್ಖೆಮ್ ಮತ್ತು ಲೀಚೊಂಬಾಮ್ ರಾಜ್ಯದಲ್ಲಿನ ಬಿಜೆಪಿ ಸರಕಾರದ ನಿರ್ಭೀತ ಟೀಕಾಕಾರರಾಗಿದ್ದು, ಪರಿಣಾಮವಾಗಿ ಹಲವಾರು ಪ್ರಕರಣಗಳನ್ನು ಮೈಮೇಲೆಳೆದುಕೊಂಡಿದ್ದರು.
ರಾಜ್ಯದಲ್ಲಿ ಸ್ವಾತಂತ್ರ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ದಿನವನ್ನು ಆಚರಿಸಿದ್ದನ್ನು ಫೇಸ್ಬುಕ್ನಲ್ಲಿ ಪ್ರಶ್ನಿಸಿದ್ದಕ್ಕಾಗಿ ಮತ್ತು ಬಿರೇನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ್ದಕ್ಕಾಗಿ ಸ್ವತಂತ್ರ ಸುದ್ದಿ ಜಾಲತಾಣ ‘ಫ್ರಾಂಟಿಯರ್ ಮಣಿಪುರ’ದ ಪತ್ರಕರ್ತರಾಗಿರುವ ವಾಂಗ್ಖೆಮ್ 2018ರಲ್ಲಿ ಮೊದಲ ಬಾರಿ ಎನ್ಎಸ್ಎ ಅಡಿ ಬಂಧಿತರಾಗಿದ್ದರು.
2016ರಲ್ಲಿ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ ಶರ್ಮಿಳಾ ಅವರೊಂದಿಗೆ ಪೀಪಲ್ಸ್ ರಿಸರ್ಜನ್ಸ್ ಆ್ಯಂಡ್ ಜಸ್ಟೀಸ್ ಅಲಯನ್ಸ್ ಅನ್ನು ಸ್ಥಾಪಿಸಿದ್ದ ಲೀಚೊಂಬಾಮ್ ಅವರ ವಿರುದ್ಧವೂ ಹಲವಾರು ಪ್ರಕರಣಗಳಿವೆ. ಕಳೆದ ವರ್ಷ ಬಿಜೆಪಿ ಶಾಸಕ ಹಾಗೂ ಮಣಿಪುರದ ನಾಮಮಾತ್ರ ದೊರೆ ಸಂಜಾವೋಬಾ ಲೀಶೆಂಬಾ ಅವರನ್ನು ‘ಸೇವಕನ ಮಗ’ ಎಂದು ಕರೆದಿದ್ದಕ್ಕಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.
ಕೃಪೆ : The print.in







