‘ಕ್ಲಬ್ಹೌಸ್’ನಲ್ಲಿ ಕರಾವಳಿಗರ ನಿಂದನೆ: ವ್ಯಾಪಕ ಆಕ್ರೋಶ
ಮಂಗಳೂರು, ಜೂ.28: ಕ್ಲಬ್ಹೌಸ್ ಸಾಮಾಜಿಕ ಜಾಲತಾಣದ ‘ಕರುನಾಡು ವರ್ಸಸ್ ತುಳುನಾಡು’ವಿನಲ್ಲಿ ಕರಾವಳಿ ಮತ್ತು ಕರಾವಳಿಗರ ಬಗ್ಗೆ ದ್ವೇಷದ ಮಾತುಗಳನ್ನಾಡಿರುವ ಆಡಿಯೋ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕದ ಇತರ ಭಾಗದವರು ಕರಾವಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸಬೇಕು. ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತಿತರ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವ ಮೂಲಕ ಮಂಗಳೂರಿಗರ ಸೊಕ್ಕು ಮುರಿಯಬೇಕು. ಕನ್ನಡದ ವಾಹಿನಿಗಳಲ್ಲೂ ಕೂಡ ಕರಾವಾಳಿಗರು ಮೆರೆಯುತ್ತಿದ್ದಾರೆ. ಅವರನ್ನು ಹೊರಗಿಡದಿದ್ದರೆ ಅಂತಹ ಚಾನಲ್ಗಳನ್ನು ನೋಡುವುದನ್ನು ನಿಲ್ಲಿಸಬೇಕು ಎಂದು ಶರತ್ ಕುಮಾರ್ ಎಂಬಾತ ಮಾತನಾಡಿರುವುದು ವೈರಲ್ ಆಗಿದೆ.
ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಧರ್ಮಸ್ಥಳಕ್ಕೆ ಯಾಕೆ ಹೋಗುತ್ತೀರಿ, ನಿಮ್ಮ ಊರಲ್ಲೇ ದೇವಸ್ಥಾನ ಕಟ್ಟಿಸಿ ಎಂದೂ ಮಂಜುನಾಥ್ ಹೇಳಿದ್ದಾನೆನ್ನಲಾಗಿದೆ. ಚರ್ಚೆ ವೇಳೆ ಒಬ್ಬಾತ ಅವಾಚ್ಯ ಶಬ್ಧಗಳಿಂದಲೂ ಕರಾವಳಿಗರನ್ನು ನಿಂದಿಸಿರುವುದು ಕೂಡ ವೈರಲ್ ಆಗಿದೆ.
ಈ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.