ಆರ್ಟಿಪಿಸಿಆರ್ ವರದಿ ಇಲ್ಲದೆ ಕೇರಳದಿಂದ ಆಗಮಿಸುವವರಿಗೆ ಸ್ಥಳದಲ್ಲೇ ಪರೀಕ್ಷೆ
ಕರ್ನಾಟಕ-ಕೇರಳ ಗಡಿಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ತಪಾಸಣೆ

ಮಂಗಳೂರು, ಜೂ.29: ಕೇರಳ ಮತ್ತು ಕರ್ನಾಟಕದ ದ.ಕ. ಜಿಲ್ಲೆಯ ಗಡಿಯಲ್ಲಿ ಕೇರಳದಿಂದ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗಟಿವ್ ವರದಿ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ. ಈ ನಿಟ್ಟಿನಲ್ಲಿ ತಪಾಸಣೆಗಾಗಿ ದ.ಕ. ಮತ್ತು ಕೇರಳ ಗಡಿ ಸಂಪರ್ಕಿಸುವ ತಲಪಾಡಿ, ಜಾಲ್ಸೂರು, ನೆಟ್ಟನಿಗೆ ಮುಡ್ನೂರು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಆರ್ಟಿ-ಪಿಸಿಆರ್ ನೆಗಟಿವ್ ವರದಿ ಹೊಂದಿದ್ದರೆ ಮಾತ್ರವೇ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಮಂಗಳೂರಿನ ತಲಪಾಡಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಯ ನಂತರ ತಪಾಸಣೆ ಆರಂಭಿಸಲಾಗಿದೆ. ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಮಂಗಳೂರು ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಸ್ಥಳದಲ್ಲಿಯೇ ಉಚಿತ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ಎರಡು ದಿನಗಳಲ್ಲಿ ಟೆಸ್ಟ್ ವರದಿ ಅವರ ಕೈಸೇರಲಿದೆ.
ಕೇರಳ ಗಡಿ ಭಾಗದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವಂತೆ ರೂಪಾಂತರಿತ ಡೆಲ್ಟಾ ಕೋವಿಡ್ ಸೋಂಕು ಪತ್ತೆಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಆ ರಾಜ್ಯದ ಗಡಿಯನ್ನು ಹಂಚಿಕೊಳ್ಳುವ ಕರ್ನಾಟಕದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ದ.ಕ. ಜಿಲ್ಲೆಯ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಲಾಗಿದೆ.





