ಸಿಂಥೆಟಿಕ್ ಡ್ರಗ್ಸ್ ಜಾಲ: ನೈಜೀರಿಯಾ ಮೂಲದ ಮತ್ತಿಬ್ಬರು ಆರೋಪಿಗಳ ಸೆರೆ

ಮಂಗಳೂರು, ಜೂ. 29: ಸಿಂಥೆಟಿಕ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಬೆಂಗಳೂರಿನ ಬಿದರಹಳ್ಳಿಯಲ್ಲಿ ನೈಜೀರಿಯಾ ಮೂಲದ ಮತ್ತಿಬ್ಬರು ಆರೋಪಿಗಳನ್ನು ಜೂ.28ರಂದು ಬಂಧಿಸಿದ್ದಾರೆ. ಈ ಮೂಲಕ ಮಂಗಳೂರು ಹಾಗೂ ಕೇರಳದ ವಿವಿಧ ಜಿಲ್ಲೆಗಳಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ- ಪೂರೈಕೆಯಲ್ಲಿ ನಿರತವಾಗಿದ್ದ ದೊಡ್ಡ ಡ್ರಗ್ಸ್ ಜಾಲವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಒಟ್ಟು 7 ಮಂದಿಯನ್ನು ಬಂಧಿಸಿದಂತಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಬಂಧಿಸಲ್ಪಟ್ಟವರನ್ನು ವೀಸಾ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ನೆಲೆಸಿದ್ದರೆನ್ನಲಾದ ನೈಜಿರೀಯಾ ಪ್ರಜೆಗಳಾದ ಪೌಲ್ ಒಹಮೋಬಿ ಯಾನೆ ಇಫೆಚುಕು ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೆಂಗಳೂರಿನಲ್ಲಿ ಟಿ ಶರ್ಟ್ ರಫ್ತು ಮಾಡುವ ಉದ್ಯೋಗದ ನೆಪದಲ್ಲಿ ಡ್ರಗ್ಸ್ ವ್ಯವಹಾರವನ್ನೂ ನಡೆಸುತ್ತಿದ್ದರೆಂದು ಕಮಿಶನರ್ ಮಾಹಿತಿ ನೀಡಿದರು.
ವಿದ್ಯಾಭ್ಯಾಸಕ್ಕಾಗಿ ವಿದೇಶದಿಂದ ಬಂದವರು ತಮ್ಮ ವೀಸಾ ಅವಧಿ ಮುಗಿದ ಬಳಿಕವೂ ಇಲ್ಲೇ ಅಕ್ರಮವಾಗಿ ನೆಲೆಸಿ ಈ ಡ್ರಗ್ಸ್ ಪೂರೈಕೆ, ಮಾರಾಟ ಜಾಲದಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಸಂಪೂರ್ಣ ವಿವರವನ್ನು ಮುಂದಿನ ತನಿಖೆಯಲ್ಲಿ ಕಲೆ ಹಾಕಲಾಗುವುದು. ಮಂಗಳೂರಿನಲ್ಲಿ ಡ್ರಗ್ಸ್ ಪೂರೈಕೆ ಕುರಿತಂತೆ ಆರಂಭದಲ್ಲಿ ಇಲ್ಲಿಗೆ ಕೇರಳದಿಂದ ಸರಬರಾಜಾಗುತ್ತಿದೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಯಿತು. ಆ ತನಿಖೆಯ ಜಾಡು ಬೆಂಗಳೂರಿನವರೆಗೆ ತಲುಪಿಸಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ವಿವರಿಸಿದರು.
ಸಿಂಥೆಟಿಕ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಪತ್ತೆಯಾಗಿತ್ತು. ಜೂ. 3ರಂದು ಪತ್ತೆಯಾದ ಪ್ರಕರಣದಲ್ಲಿ ಕೇರಳ ಮೂಲದ ಮೂವರನ್ನು ವಶಕ್ಕೆ ಪಡೆದು ಅವರಿಂದ 170 ಗ್ರಾಂ. ಎಂಡಿಎಂಎ ಹಾಗೂ ಜೂ. 13ರಂದು ಕೇರಳ ಇನ್ನಿಬ್ಬರು ಆರೋಪಿಗಳನ್ನು 65 ಗ್ರಾಂ. ಎಂಡಿಎಂಎಯೊಂದಿಗೆ ವಶಪಡಿಸಿಕೊಳ್ಳಲಾಗಿತ್ತು. ಈ ಎರಡು ಪ್ರಕರಣದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಆರೋಪಿಗಳು ಈ ನಿಷೇಧಿತ ಮಾದಕ ದ್ರವ್ಯವನ್ನು ಬೆಂಗಳೂರಿನಿಂದ ಡೀಲರ್ಗಳಾದ ನೈಜಿರಿಯಾ ನಿವಾಸಿ ಸ್ಟಾನ್ಲಿ ಚಿಮಾ ಮತ್ತು ಕೇರಳದ ಉಪ್ಪಳ ನಿವಾಸಿ ರಮೀಝ್ ಎಂಬಾತನಿಂದ ಪಡೆದುಕೊಂಡಿರುವುದಾಗಿ ಬಾಯಿ ಬಿಟ್ಟಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್ ಬಂಡಾರು ಉಪಸ್ಥಿತರಿದ್ದರು.
ಎಸಿಪಿ ರಂಜಿತ್ ಕುಮಾರ್ ನೇತೃತ್ವದಲ್ಲಿ ಸಮಗ್ರ ತನಿಖೆ
ನೈಜೀರಿಯ ಮೂಲದ ಮತ್ತಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸುವ ಮೂಲಕ ಡ್ರಗ್ಸ್ ಪೂರೈಕೆಯ ಪ್ರಮುಖ ಜಾಲವೊಂದನ್ನು ಬೇಧಿಸಲಾಗಿದೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಇರುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. ಈ ಪ್ರಕರಣದ ಸಮಗ್ರ ತನಿಖೆಗಾಗಿ ಎಸಿಪಿ ರಂಜಿತ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
-ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.







