ಪಡುಬಿದ್ರಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿನಯ ಕುಮಾರ್ ಸೊರಕೆ ಭೇಟಿ, ಪರಿಶೀಲನೆ
![ಪಡುಬಿದ್ರಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿನಯ ಕುಮಾರ್ ಸೊರಕೆ ಭೇಟಿ, ಪರಿಶೀಲನೆ ಪಡುಬಿದ್ರಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿನಯ ಕುಮಾರ್ ಸೊರಕೆ ಭೇಟಿ, ಪರಿಶೀಲನೆ](https://www.varthabharati.in/sites/default/files/images/articles/2021/06/29/296734-1624973882.jpg)
ಪಡುಬಿದ್ರಿ: ಎಲ್ಲೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜ್ಯದಲ್ಲಿಯೇ ಮಾದರಿಯಾಗಿರುವಂತಹ ಕಾಪು ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಸೊರಕೆಯವರು ಈ ಹಿಂದೆ ಕಾಪು ಕ್ಷೇತ್ರದ ಶಾಸಕರಾಗಿ ನಗರಾಭಿವೃದ್ಧಿ ಸಚಿವರಾಗಿರುವ ಸಂದರ್ಭದಲ್ಲಿ ಈ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿದರು. ಈಗಾಗಲೇ ಈ ಕಾಮಗಾರಿಯ ಸಿವಿಲ್ ಕೆಲಸಕ್ಕೆ 5ಕೋಟಿ90 ಲಕ್ಷದಲ್ಲಿ ಟೆಂಡರ್ ಆಗಿದ್ದು ಕಾಮಗಾರಿಯು ಪ್ರಗತಿಯಲ್ಲಿದೆ. ಅಲ್ಲದೇ ವಾಹನ, ಯಂತ್ರೋಪಕರಣಕ್ಕೆ 1ಕೋಟಿ 20 ಲಕ್ಷ ಹಿಂದಿನ ಸರ್ಕಾರ ಇರುವಾಗ ಮಂಜೂರಾಗಿರುತ್ತದೆ.
ಈ ಒಂದು ಕಾಮಗಾರಿ ಅನುದಾನವನ್ನು ಬಿಡುಗಡೆಗೊಳಿಸಿ ನೇರವಾಗಿ ಚೆಕ್ಕನ್ನು ಪುರಸಭಾ ಖಾತೆಗೆ ಜಮೆ ಮಾಡಿಸಿರುವುದು ಸೊರಕೆಯವರ ಸಾಧನೆಯಾಗಿದ್ದು, ಈ ಒಂದು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪುರಸಭೆಯ ಒಟ್ಟಾಗುವ ಕಸಗಳು ಸಾಕಾಗುವುದಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಆಸುಪಾಸಿನ ಪಂಚಾಯಿತಿಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಈ ಘಟಕಕ್ಕೆ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ,ಪಡುಬಿದ್ರೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ನವೀನ್ ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ರಮೇಶ್ ಪಾದಬೆಟ್ಟು, ದಿವಾಕ ಬೊಳಜೆ, ನಿಝಾಮುದ್ದಿನ್, ಅಶ್ವಥ್ ಆಚಾರ್ಯ ಹಾಗೂ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಅಶೋಕ್ ನಾಯರಿ ಅವರು ಉಪಸ್ಥಿತರಿದ್ದರು.