ರಸ್ತೆ ಬದಿ ನಿಲ್ಲಿಸಿದ್ದ ಕಂಟೇನರ್ ನಿಂದ 35 ಲಕ್ಷ ರೂ. ಮೌಲ್ಯದ ವಸ್ತುಗಳ ಕಳವು
ಬೆಂಗಳೂರು, ಜೂ.29: ರಸ್ತೆ ಬದಿ ನಿಲ್ಲಿಸಿದ್ದ ಕಂಟೇನರ್ ನಲ್ಲಿ 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಇಲ್ಲಿನ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿಯ ಬಳಿ ನಡೆದಿದೆ.
ಮಹಾರಾಷ್ಟ್ರದಿಂದ ಹೊಸಕೋಟೆಗೆ ಬರುತ್ತಿದ್ದ ಫ್ಲಿಪ್ಕಾರ್ಟ್ಗೆ ಸೇರಿದ ಸಾಮಗ್ರಿಗಳನ್ನು ತುಂಬಿದ್ದ ಕಂಟೇನರ್ ಮಾರ್ಗ ಮಧ್ಯದ ಕೆಂಗಲ್ ಕೆಂಪೋಹಳ್ಳಿಯ ಬಳಿ ನಿಲ್ಲಿಸಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಂಗಲ್ ಕೆಂಪೋಹಳ್ಳಿ ಗ್ರಾಮದ ರಸ್ತೆ ಬದಿ ಕಂಟೇನರ್ ನಿಲ್ಲಿಸಿ ಲಾರಿ ಚಾಲಕ ರಂಗಸ್ವಾಮಿ ವಿಶ್ರಾಂತಿ ಪಡೆಯಲು ಮಲಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬಳಿಕ ಅನ್ಲೋಡ್ ಮಾಡುವ ವೇಳೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಕಂಟೇನರ್ ನಲ್ಲಿ ಸುಮಾರು 1 ಕೋಟಿ 60 ಲಕ್ಷ ಮೌಲ್ಯದ ಸಾಮಗ್ರಿಗಳಿದ್ದು ಅದರಲ್ಲಿ ದುಷ್ಕರ್ಮಿಗಳು ಸುಮಾರು 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಂಟೇನರ್ ಚಾಲಕ ರಂಗಸ್ವಾಮಿಯ ಮೇಲೆ ಲಾರಿ ಮಾಲಕ ಅನುಮಾನ ವ್ಯಕ್ತಪಡಿಸಿ ನೀಡಿದ ದೂರಿನ್ವಯ ಇಲ್ಲಿನ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





