ಉದ್ಯಾವರ ಸಮೀಪ ಅಪಘಾತ: ಗಾಯಾಳು ಗೃಹರಕ್ಷಕ ದಳದ ಸಿಬ್ಬಂದಿ ಮೃತ್ಯು
![ಉದ್ಯಾವರ ಸಮೀಪ ಅಪಘಾತ: ಗಾಯಾಳು ಗೃಹರಕ್ಷಕ ದಳದ ಸಿಬ್ಬಂದಿ ಮೃತ್ಯು ಉದ್ಯಾವರ ಸಮೀಪ ಅಪಘಾತ: ಗಾಯಾಳು ಗೃಹರಕ್ಷಕ ದಳದ ಸಿಬ್ಬಂದಿ ಮೃತ್ಯು](https://www.varthabharati.in/sites/default/files/images/articles/2021/06/30/296868-1625061575.jpeg)
ಉಡುಪಿ, ಜೂ.30: ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮುಂಜಾನೆ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಲ್ಕಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ರಾಕೇಶ್ (27) ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾಕೇಶ್ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಇಂದು ಮುಂಜಾನೆ 5:30ರ ಸುಮಾರಿಗೆ ಮುಲ್ಕಿಯಿಂದ ತನ್ನ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು.
ಉದ್ಯಾವರದ ಬಳಿ ರಾಕೇಶ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ತೆರಳುತ್ತಿದ್ದ ಟ್ಯಾಂಕರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ರಾಕೇಶ್ ಅವರನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಮೃತರು ಮುಲ್ಕಿ ಕುಬೆವೂರು ನಿವಾಸಿ ಶಾಂತಾರಾಮ ಹಾಗೂ ವಾರಿಜಾ ದಂಪತಿ ಪುತ್ರ ಹಾಗು ಅವಿವಾಹಿತರಾಗಿದ್ದರು.