ಡೆಲ್ಟಾ ಪ್ಲಸ್ ಸೋಂಕು; ಕೇರಳದಿಂದ ಆಗಮಿಸುವವರ ಕುರಿತು ವಿಶೇಷ ಕಣ್ಗಾವಲು ವಹಿಸುವಂತೆ ರಾಜ್ಯ ಸರಕಾರ ಆದೇಶ
ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರಿಗೆ ವಿನಾಯಿತಿ
ಮಂಗಳೂರು, ಜು.1: ಕೇರಳ ರಾಜ್ಯದಲ್ಲಿ ಕೋವಿಡ್ನ ರೂಪಾಂತಗರಿ ಡೆಲ್ಟಾ ಪ್ಲಸ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದಿಂದ ಆಗಮಿಸುವವರ ಕುರಿತು ವಿಶೇಷ ಕಣ್ಗಾವಲು ವಹಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.
ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವಿಶೇಷ ಕಣ್ಗಾವಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ವಿಮಾನ, ರೈಲು, ಬಸ್, ಟ್ಯಾಕ್ಸಿ, ಸ್ವಂತ ವಾಹನಗಳ ಮೂಲಕ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿರುವ ಆರ್ಟಿಪಿಸಿಆರ್ ನೆಗೆಟಿವ್ ಪರೀಕ್ಷೆಯ ವರದಿಯನ್ನು ಹೊಂದಿರತಕ್ಕದ್ದು. ಇದು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲ ವಿಮಾನಯಾನಗಳೀಗೂ ಅನ್ವಯ ವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪರಿಶೀಲಿಸಬೇಕು ಎಂದು ಆದೇಶಲ್ಲಿ ಉಲ್ಲೇಖಿಸಲಾಗಿದೆ.
ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಾದ ದ.ಕ. ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳಿಗೆ (ಚಾಲಕರು, ಕ್ಲೀನರ್, ಪ್ರಯಾಣಿಕರು, ) ಚೆಕ್ಪೋಸ್ಟ್ಗಳಲ್ಲಿ ನಿಗಾವಹಿಸಬೇಕು.
ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ-ವ್ಯವಹಾರ ಸೇರಿದಂತೆ ಇತರ ಕಾರಣಗಳಿಗೆ ದಿನನಿತ್ಯ ಭೇಟಿ ನೀಡುವ ವಿದ್ಯಾರ್ಥಿಗಳು/ಸಾರ್ವಜನಿಕರು ಪ್ರತಿ 15 ದಿನಗಳಿಗೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು, ಕೋವಿಡ್ ನೆಗೆಟಿವ್ ವರದಿಯನ್ನು ಹೊಂದುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿನಾಯಿತಿ: ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದಿರುವ ಕುರಿತು ಪ್ರಮಾಣ ಪತ್ರ ಹೊಂದಿರುವವರು, ಸಾಂವಿಧಾನಿಕ ಕಾರ್ಯಕಾರಿಗಳು-ವೈದ್ಯಕೀಯ ಸಿಬ್ಬಂದಿ, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ತುರ್ತು ಸಂದರ್ಭದಲ್ಲಿ (ಕುಟುಂಬದಲ್ಲಿ ಮರಣ ಸಂಭವಿಸಿದ ಪಕ್ಷದಲ್ಲಿ, ವೈದ್ಯಕೀಯ ಚಿಕಿತ್ಸೆ ಇತ್ಯಾದಿ) ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಸ್ವಾಬ್ ಮಾದರಿಗಳನ್ನು ಪರೀಕ್ಷೆಗಾಗಿ ರಾಜ್ಯದಲ್ಲಿಯೇ ಸಂಗ್ರಹಿಸತಕ್ಕದ್ದು. ಇಂತಹ ಪ್ರಯಾಣಿಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯ ಪೂರ್ಣ ವಿವರಗಳನ್ನು ಗುರುತಿನ ಚೀಟಿಯ ಆಧಾರದಲ್ಲಿ ಪಡೆಯತಕ್ಕದ್ದು. ಇವರೆಲ್ಲರಿಗೂ ರಾಜ್ಯ ಪ್ರವೇಶಿಸಲು ವಿನಾಯಿತಿ ನೀಡಬಹುದಾಗಿದೆ. ಆರ್ಟಿಪಿಸಿಆರ್ ಪರೀಕ್ಷೆಯ ವರದಿಯ ಆಧಾರದಲ್ಲಿ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.







