ಭಟ್ಕಳ: ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಭಟ್ಕಳ : ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕ, ಹಿರಿಯ ಸಹಕಾರಿ ಧುರೀಣ ಡಿ ಬಿ ನಾಯ್ಕ ಹಾಗೂ ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಾಮಾಜಿಕ ಕಾರ್ಯಕರ್ತ ರುಕ್ನುದ್ದೀನ್ ನಿಸ್ಸಾರ್ ಅಹ್ಮದ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಸಮಾಜದಲ್ಲಿ ತನ್ನದೇ ಆದ ಜವಾಬ್ದಾರಿ ನಿರ್ವಹಿಸುತ್ತಿದೆ. ಸಮಾಜದಲ್ಲಿ ಆಗಬೇಕಾದ ಅಭಿವೃದ್ಧಿ, ಕುಂದುಕೊರತೆಗಳ ಕುರಿತು ವರದಿ ಮಾಡಿ ಸರಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುತ್ತಿದೆ. ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿ ಕೊಂಡು ಸಮಾಜದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು.
ಉಪಸ್ಥಿತರಿದ್ದ ಇನ್ನೋರ್ವ ಮುಖ್ಯಅತಿಥಿ ಡಿವೈಎಸ್ಪಿ ಕೆ ಯು ಬೆಳ್ಳಿಯಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪತ್ರಿಕೆ ಓದುವವರ ಸಂಖ್ಯೆ ಕಡಿಮೆ ಆಗಿದೆ. ಯುವ ಜನಾಂಗ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ ಎಂದ ಅವರು ಪತ್ರಕರ್ತರು ಸಮಾಜದ ಸಿಸಿ ಕ್ಯಾಮರಾ ಇದ್ದಂತೆ. ಸಮಾಜದ ಅಂಕುಡೊಂಕು, ಆಗು ಹೋಗು, ಕುಂದುಕೊರತೆಗಳನ್ನು ವರದಿ ಮೂಲಕ ತಿಳಿಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು. ಸನ್ಮಾನಿತರಾದ ಡಿ ಬಿ ನಾಯ್ಕ, ರುಕ್ನುದ್ದೀನ ನಿಸ್ಸಾರ್ ಅಹ್ಮದ್ ಮಾತನಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ಪತ್ರಿಕಾ ದಿನಾಚರಣೆ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಮಾತನಾಡಿದರು. ಕಾರ್ಯದರ್ಶಿ ಮೋಹನ ನಾಯ್ಕ ಸ್ವಾಗತಿಸಿ, ನಿರ್ವಹಿಸಿದರು. ಎಂ ಆರ್ ಮಾನ್ವಿ ವಂದಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸತೀಶಕುಮಾರ, ರಾಘವೇಂದ್ರ ಹೆಬ್ಬಾರ, ಇನಾಯತುಲ್ಲಾ ಗವಾಯಿ, ಅತೀಕುರ್ರೆಹಮಾನ ಶಾಬಂದ್ರಿ, ರಿಝ್ವಾನ್ ಗಂಗಾವಳಿ, ಫಯಾಝ್ ಮುಲ್ಲಾ, ಭವಾನಿಶಂಕರ ನಾಯ್ಕ, ಪ್ರಸನ್ನ ಭಟ್ಟ, ಉದಯ ನಾಯ್ಕ, ಶೈಲೇಶ ವೈದ್ಯ ಉಪಸ್ಥಿತರಿದ್ದರು.







