ಸಂಕಷ್ಟದ ದಿನಗಳಲ್ಲಿ ರೋಟರಿ ಕ್ಲಬ್ ಸೇವೆ ಅನನ್ಯ: ಜಿಲ್ಲಾಧಿಕಾರಿ ಡಾ. ರಾಜೇಂದ್ರ
![ಸಂಕಷ್ಟದ ದಿನಗಳಲ್ಲಿ ರೋಟರಿ ಕ್ಲಬ್ ಸೇವೆ ಅನನ್ಯ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸಂಕಷ್ಟದ ದಿನಗಳಲ್ಲಿ ರೋಟರಿ ಕ್ಲಬ್ ಸೇವೆ ಅನನ್ಯ: ಜಿಲ್ಲಾಧಿಕಾರಿ ಡಾ. ರಾಜೇಂದ್ರ](https://www.varthabharati.in/sites/default/files/images/articles/2021/07/2/297204-1625244618.jpg)
ಮಂಗಳೂರು, ಜು.2: ಕೋವಿಡ್ನ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಟರಿ ಕ್ಲಬ್ನಂತಹ ಸಮಾಜ ಸೇವಾ ಸಂಸ್ಥೆಗಳು ನಿರ್ವಹಿಸು ತ್ತಿರುವ ಸೇವಾಕಾರ್ಯ ಅನನ್ಯವಾದುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದ್ದಾರೆ.
ವಿಶೇಷ ಮಕ್ಕಳು ‘ಸಾನಿಧ್ಯ’ ಶಾಲೆಗೆ ಆಗಮಿಸಲು ಅನುಕೂಲವಾಗುವಂತೆ ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಹಾಗೂ ಅಮೆರಿಕದ ರೋಟರಿ ಕ್ಲಬ್ ಜೊತೆಯಾಗಿ ಸೇರಿ ಶಾಲಾ ಬಸ್ನ್ನು ದಾನವಾಗಿ ನೀಡಿರುವುದು ಶ್ಲಾಘನೀಯ. ವಿಶೇಷ ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರಚೋದಿಸಿ ತರಬೇತಿ ನೀಡಿ, ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿರುವ ಸಾನಿಧ್ಯದ ಆಡಳಿತ ವರ್ಗ, ಶಿಕ್ಷಕ ವೃಂದ ಉತ್ತಮ ಸೇವಾಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಜಿಲ್ಲಾ ರಾಜ್ಯಪಾಲ ರಂಗನಾಥ್ ಭಟ್ ವಹಿಸಿದ್ದರು. ಬಸ್ನ್ನು ಸಾನಿಧ್ಯದ ಆಡಳಿತಾಧಿ ಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು. ರೋಟರಿ ಜಿಲ್ಲಾ ಪೂರ್ವ ರಾಜ್ಯಪಾಲ ಕೃಷ್ಣ ಶೆಟ್ಟಿ ಸಾನಿಧ್ಯದ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ರಂಗನಾಥ್ ಭಟ್, ಕೃಷ್ಣ ಶೆಟ್ಟಿ , ನಿತಿನ್ ಕಾಮತ್ ಹಾಗೂ ಶ್ಯಾಮ್ ಪ್ರಕಾಶ್ ಅವರನ್ನು ಸಾನಿಧ್ಯದ ಪರವಾಗಿ ಜಿಲ್ಲಾಧಿಕಾರಿ ಸನ್ಮಾನಿಸಿದರು. ಸಾನ್ನಿಧ್ಯದ ವಿಶೇಷ ಶಿಕ್ಷಕರು ಹಾಗೂ ವಿಶೇಷ ಮಕ್ಕಳ ಅನುಕೂಲತೆಗೆ ಸಹಕಾರಿಯಾಗಿರುವ ಪ್ರೊಜೆಕ್ಟರ್, ಲ್ಯಾಪ್ಟಾಪ್, ಸ್ಕ್ರೀನ್ ಇತ್ಯಾದಿಗಳನ್ನು ವಲಯ 3ರ ಉಪ ರಾಜ್ಯಪಾಲ ಗೋಪಾಲಕೃಷ್ಣ ಶೆಟ್ಟಿ ಹಾಗೂ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಯಮುನಾ ಡಿ. ಸಾನಿಧ್ಯ ಶಾಲೆಗೆ ಹಸ್ತಾಂತರಿಸಿದರು.
ವಿಶೇಷ ಮಕ್ಕಳು ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಸಾನಿಧ್ಯ ಶಿಕ್ಷಕ ವೃಂದ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಗೋಪಾಲಕೃಷ್ಣ ಶೆಟ್ಟಿ ವಂದಿಸಿದರು. ಗಣೇಶ ಸೇವಾ ಟ್ರಸ್ಟಿನ ಜೊತೆ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು.