ಜೆಡಿಎಸ್ ಪಕ್ಷಕ್ಕೆ ಸಿದ್ದರಾಮಯ್ಯ ಯಾವತ್ತೂ ಮೋಸ ಮಾಡಿಲ್ಲ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು
ಮೈಸೂರು,ಜು.2: ಪಾಪದ ಕೊಡ ತುಂಬೋದಕ್ಕೆ ಯಾರೂ ಏನು ಪಾಪ ಮಾಡಿಲ್ಲ, ಯಾಕೆಂದರೆ ಜೆಡಿಎಸ್ ಪಕ್ಷಕ್ಕೆ ಸಿದ್ದರಾಮಯ್ಯನವರು ಯಾವತ್ತೂ ಮೋಸ ಮಾಡಿಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ ಎಂದಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಮೈಸೂರಿನ ವರುಣ ಕ್ಷೇತ್ರದ ಸೋಮೇಶ್ವರಪುರ ಗ್ರಾಮದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಜೆಡಿಎಸ್ ಪಕ್ಷದವರೇ ಪಕ್ಷದಲ್ಲಿ ಬೆಳೆಯುತ್ತಿರುವ ನಾಯಕರುಗಳನ್ನು ಮೊಟಕುಗೊಳಿಸಬೇಕು ಅಂತ ಹೇಳಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಹಾಗಾಗಿ ಯಾರೂ ಯಾವ ಪಾಪನೂ ಮಾಡಿಲ್ಲ. ಮತ್ತೆ ಪಕ್ಷದಿಂದ ಹೊರಗೆ ಬಂದ ಮೇಲೆ ಸಿದ್ದರಾಮಯ್ಯನವರಿಗೆ ಒಳ್ಳೆಯದೇ ಆಗಿದೆ. ಈಗಲೂಕೂಡ ಕಾಂಗ್ರೆಸ್ ನಲ್ಲಿ ಒಳ್ಳೆಯದೇ ಆಗುತ್ತಿದೆ.
ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮತ್ತೆ ನಮ್ಮ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ. ಆದರೆ ಜೆಡಿಎಸ್ ಪಕ್ಷ ಮಾತ್ರ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ ಎಂದು ಹೇಳಿದರು.