ಮಂಗಳೂರು; ಲಿಂಬೆ ಹಣ್ಣುಗಳ ಜತೆ ಗಾಂಜಾ ಸಾಗಾಟ! : 40 ಕೆಜಿ ಗಾಂಜಾ ವಶ, ಇಬ್ಬರ ಬಂಧನ
![ಮಂಗಳೂರು; ಲಿಂಬೆ ಹಣ್ಣುಗಳ ಜತೆ ಗಾಂಜಾ ಸಾಗಾಟ! : 40 ಕೆಜಿ ಗಾಂಜಾ ವಶ, ಇಬ್ಬರ ಬಂಧನ ಮಂಗಳೂರು; ಲಿಂಬೆ ಹಣ್ಣುಗಳ ಜತೆ ಗಾಂಜಾ ಸಾಗಾಟ! : 40 ಕೆಜಿ ಗಾಂಜಾ ವಶ, ಇಬ್ಬರ ಬಂಧನ](https://www.varthabharati.in/sites/default/files/images/articles/2021/07/3/297265-1625306285.jpg)
ಮಂಗಳೂರು, ಜು. 3: ಲಿಂಬೆ ಹಣ್ಣುಗಳ ಜತೆ ಗಾಂಜಾ ಪ್ಯಾಕೇಟ್ಗಳನ್ನು ಸಾಗಿಸುತ್ತಿದ್ದ ಬೊಲೆರೋ ಮ್ಯಾಕ್ಸಿ ಟ್ರಕ್ ವಾಹನವನ್ನು ಸ್ವಾಧೀನ ಪಡಿಸಿಕೊಂಡಿರುವ ಉರ್ವ ಠಾಣೆಯ ಪೊಲೀಸರು ಮಾದಕ ದ್ರವ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿ ಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡಿನ ಶಿಹಾಬುದ್ದೀನ್ (32), ಲತೀಫ್ (38) ಎಂದು ಗುರುತಿಸಲಾಗಿದೆ.
ಆರೋಪಿಗಳು ಆಂಧ್ರ ಪ್ರದೇಶದಿಂದ ಕೇರಳಕ್ಕೆ ಸಾಗಾಟ ಮಾಡಲೆತ್ನಿಸುತ್ತಿದ್ದ ತಲಾ 2 ಕೆಜಿ ತೂಕದ 20 ಗಾಂಜಾ ಪ್ಯಾಕೇಟ್ಗಳನ್ನು (40 ಕೆಜಿ) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉರ್ವ ಪೊಲೀಸ್ ಠಾಣೆ ನಿರೀಕ್ಷಕ ಜ್ಯೋತಿರ್ಲಿಂಗ ಹೊನಕಟ್ಟಿ ಹಾಗೂ ಸಿಬ್ಬಂದಿ ನಿನ್ನೆ ರಾತ್ರಿ 8 ಗಂಟೆಯ ವೇಳೆಗೆ ಉಡುಪಿ ಕಂಡೆ ಯಿಂದ ಕೇರಳಕ್ಕೆ ತೆರಳುತ್ತಿದ್ದ ಬೊಲೆರೋ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ನಿಂಬೆ ಹಣ್ಣಿನ ಟ್ರೇಗಳ ಜತೆ ಈ ಗಾಂಜಾ ಕಂಡು ಬಂದಿದೆ ಎಂದು ಡಿಸಿಪಿ ಹರಿರಾಂ ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಕಾಸರಗೋಡು ಹಾಗೂ ಮಂಗಳೂರು ನಗರ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಪೂರೈಕೆಗಾಗಿ ಈ ಮಾದಕ ದ್ರವ್ಯಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆಂಧ್ರ ಪ್ರದೇಶದಿಂದ ಈ ಮಾದಕ ದ್ರವ್ಯವನ್ನು ತರಿಸಲಾಗಿದೆ ಎಂದು ಅವರು ಹೇಳಿದರು.
ಆಂಧ್ರ ಪ್ರದೇಶ, ಒರಿಸ್ಸಾ ಮೊದಲಾದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಈ ಗಾಂಜಾವನ್ನು ಬೆಳೆಯುತ್ತಿದ್ದು, ಅದನ್ನು ದಕ್ಷಿಣ ರಾಜ್ಯಗಳಿಗೆ ಪೂರೈಕೆ ಮಾಡುತ್ತಿರುವ ಬಗ್ಗೆ ಅನುಮಾನವಿದೆ. ಆಂದ್ರ ಪ್ರದೇಶದಲ್ಲಿ ಕೆಲ ಸಮಯದ ಹಿಂದೆ ಸುಮಾರು 13,000 ಕೆಜಿ ಗಾಂಜಾವನ್ನು ಅಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ಅವರು ಹೇಳಿದರು.
![](https://www.varthabharati.in/sites/default/files/images/galllery/2021/07/3/PSX_20210703_125508.jpg)