ಜು.5ರಿಂದ ತೈಲ, ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಸಿಪಿಎಂನಿಂದ ವಾರಾಚರಣೆ
ಮಂಗಳೂರು, ಜು.3: ಪೆಟ್ರೋಲ್, ಡೀಸೆಲ್ ಅಡುಗೆ ಅನಿಲಗಳ ಬೆಲೆ ಏರಿಕೆ ಖಂಡಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜು.5ರಿಂದ 12ರವರೆಗೆ ಮಂಗಳೂರು ನಗರದಾದ್ಯಂತ ಕನಿಷ್ಠ 50 ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ವಾರಾಚರಣೆ ಹಮ್ಮಿಕೊಳ್ಳಲು ಸಿಪಿಎಂ ದ.ಕ. ಜಿಲ್ಲಾ ಸಮಿತಿ ನಿರ್ಧರಿಸಿದೆ.
ಜೊತೆಗೆ, ಜು.7ರಂದು ಬೆಳಗ್ಗೆ 10ಕ್ಕೆ ನಗರದ ಹಂಪನಕಟ್ಟೆ ಜಂಕ್ಷನ್ನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ ಮಾರ್ಗದರ್ಶನದಲ್ಲಿ ಹಾಗೂ ಸಿಪಿಎಂ ಮಂಗಳೂರು ಉತ್ತರ ಸಮಿತಿ ಕಾರ್ಯದರ್ಶಿ ದಯಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಿಪಿಎಂ ಮಂಗಳೂರು ನಗರ ದಕ್ಷಿಣ, ಉತ್ತರ ಸಮಿತಿಗಳ ಜಂಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಚ್ಛೆ ದಿನ್ ತರುವುದಾಗಿ, ಬೆಲೆ ಏರಿಕೆ ತಡೆಗಟ್ಟುವುದಾಗಿ ಮುಂತಾದ ಬಣ್ಣ ಬಣ್ಣದ ಮಾತುಗಳಿಂದ ಜನರನ್ನು ಮರಳುಗೊಳಿಸಿ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ವಿಪರೀತ ಹೆಚ್ಚಳವಾಗುತ್ತಿದೆ. ಆದರೂ ನರೇಂದ್ರ ಮೋದಿ ಸರಕಾರ ಬಾಯಿ ಬಿಡುತ್ತಿಲ್ಲ. ಮತ್ತೊಂದೆಡೆ ರಾಜ್ಯದ ಬಿಜೆಪಿ ಸರಕಾರ ವಿದ್ಯುತ್ ದರವನ್ನು ಕೂಡ ವಿಪರೀತ ಹೆಚ್ಚಿಸಿ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇವೆಲ್ಲದಕ್ಕೆ ಪೂರಕವೆಂಬಂತೆ ದ.ಕ. ಜಿಲ್ಲೆಯ ಖಾಸಗಿ ಬಸ್ ಮಾಲಕರು ಕೂಡ ಏಕಾಏಕಿಯಾಗಿ ಬಸ್ ಪ್ರಯಾಣ ದರ ಏರಿಸಿರುವುದು, ಇದಕ್ಕೆ ಜಿಲ್ಲಾಡಳಿತವು ಸಂಪೂರ್ಣ ಒಪ್ಪಿಗೆ ಸೂಚಿಸಿರುವುದು ತೀವ್ರ ಖಂಡನೀಯ ಎಂದು ಸಿಪಿಎಂ ಆಕ್ರೋಶ ವ್ಯಕ್ತಪಡಿಸಿದೆ.
ಇಂತಹ ನ್ಯಾಯಪರ ಹೋರಾಟಗಳಲ್ಲಿ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಸೋಲಿಸಬೇಕೆಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







