ಅನ್ಲಾಕ್ 3.0; ಸಹಜ ಸ್ಥಿತಿಯತ್ತ ದ.ಕ.ಜಿಲ್ಲೆ: ಬಾಗಿಲು ತೆರೆದ ಮಾಲ್ಗಳು
![ಅನ್ಲಾಕ್ 3.0; ಸಹಜ ಸ್ಥಿತಿಯತ್ತ ದ.ಕ.ಜಿಲ್ಲೆ: ಬಾಗಿಲು ತೆರೆದ ಮಾಲ್ಗಳು ಅನ್ಲಾಕ್ 3.0; ಸಹಜ ಸ್ಥಿತಿಯತ್ತ ದ.ಕ.ಜಿಲ್ಲೆ: ಬಾಗಿಲು ತೆರೆದ ಮಾಲ್ಗಳು](https://www.varthabharati.in/sites/default/files/images/articles/2021/07/5/297527-1625469926.jpeg)
ಮಂಗಳೂರು, ಜು. 5: ಕೋವಿಡ್ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್ಡೌನ್ ಸಡಿಲಗೊಂಡಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಧಾರ್ಮಿಕ ಕೇಂದ್ರಗಳೂ ಬಾಗಿಲು ತೆರೆದು ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿವೆ. ಕಳೆದ ಸುಮಾರು ಎರಡೂವರೆ ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಮಂಗಳೂರು ನಗರದಲ್ಲಿ ಮಾಲ್ಗಳು (ಸಿನೆಮಾ ಥಿಯೇಟರ್ ಹೊರತುಪಡಿಸಿ) ಕೂಡಾ ಬಾಗಿಲು ತೆರೆದಿವೆ.
ಸುಮಾರು ಎರಡು ತಿಂಗಳಿಗೂ ಅಧಿಕ ಕಾಲ ಕೊರೋನ ಎರಡನೆ ಅಲೆಯ ಲಾಕ್ಡೌನ್ನಿಂದಾಗಿ ಜನಜೀವನ ಬಹುತೇಕವಾಗಿ ಗೃಹಬಂಧನಕ್ಕೊಳಪಟ್ಟಿತ್ತು. ಕೆಲ ದಿನಗಳಿಂದ ಮಧ್ಯಾಹ್ನದವರೆಗೆ, ಮತ್ತೆ ಸಂಜೆಯವರೆಗೆ ಲಾಕ್ಡೌನ್ ವಿನಾಯಿತಿ ನೀಡಲಾಗಿ ತ್ತಾದರೂ, ಇದೀಗ ಪೂರ್ಣ ಪ್ರಮಾಣದ ಲಾಕ್ಡೌನ್ ವಿನಾಯಿತಿ ಜನರನ್ನು ಗೃಹಬಂಧನದಿಂದ ಮುಕ್ತಗೊಳಿಸಿ ಸಹಜ ಜೀವನಕ್ಕೆ ಮರಳಲು ಅವಕಾಶ ಕಲ್ಪಿಸಿದೆ.
ಜಿಲ್ಲೆಯಾದ್ಯಂತ ಕೆಎಸ್ಆರ್ಟಿಸಿ ಬಸ್ಸುಗಳು ಸೇರಿದಂತೆ ಖಾಸಗಿ ಸಿಟಿ ಹಾಗೂ ಸರ್ವಿಸ್ ಬಸ್ಸುಗಳು ಬಹುತೇಕವಾಗಿ ರಸ್ತೆಗಿಳಿದಿವೆ. ಕಚೇರಿ, ಅಂಗಡಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕೂಡಾ ಇಂದು ಬಸ್ಸು ಹಾಗೂ ತಮ್ಮ ಖಾಸಗಿ ವಾಹನಗಳ ಮೂಲಕ ತಮ್ಮ ಕೆಲಸದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬಸ್ಸು ಸಂಚಾರಕ್ಕೆ ಅವಕಾಶ ದೊರಕಿದ್ದರೂ ಸೀಮಿತ ಅವಧಿಯಲ್ಲಿ ಸಿಟಿ ಬಸ್ಸುಗಳು ರಸ್ತೆಗಿಳಿದಿದ್ದವು. ಇದೀಗ ರಾತ್ರಿ 9 ಗಂಟೆಯವರೆಗೆ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿರುವುದರಿಂದ ಬಸ್ಸು ಸಂಚಾರವೂ ಅಬಾಧಿತವಾಗಿದ್ದು, ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಉತ್ಸಾಹದಿಂದಲೇ ಆರಂಭಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನಗರದ ಖಾಸಗಿ ಬಸ್ಸುಗಳಲ್ಲಿ ತುಸು ಪ್ರಯಾಣಿಕರು ಕಂಡು ಬಂದಿದ್ದು, ಬಳಿಕ ಬೆರಳೆಣಿಕೆಯ ಪ್ರಯಾಣಿಕರೊಂದಿಗೆ ಬಸ್ಸುಗಳು ಸಂಚಾರ ನಡೆಸುತ್ತಿವೆ. ಅನ್ಲಾಕ್ 3.0 ಗೆ ಜನಸಾಮಾನ್ಯರಿಂದ ಉತ್ತಮ ಸ್ಪಂದನೆ ದೊರಕಿದ್ದು, ಜಿಲ್ಲೆಯಲ್ಲಿ ಕುಂಠಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಆರಂಭವಾಗಲಾರಂಭಿಸಿದೆ.
ಮೈ ಮರೆಯದಿರೋಣ: ನಿಯಮ ಪಾಲಿಸೋಣ
ಕೊರೋನ ಒಂದು ಮತ್ತು ಎರಡನೆ ಅಲೆ ಸಾಕಷ್ಟು ಸಾವು ನೋವು, ಆರ್ಥಿಕ ನಷ್ಟಕ್ಕೆ ಕಾರಣವಾಗಿ, ಜನಜೀವನವನ್ನು ದುಸ್ತರಗೊಳಿಸಿದೆ. ಕೊರೋನ ಒಂದನೆ ಅಲೆಯ ಬಳಿಕದ ಅನ್ಲಾಕ್ನಲ್ಲಿಯೂ ಕೋವಿಡ್ ನಿಯಮಗಳನ್ನು ನಾವು ಪಾಲಿಸುವಲ್ಲಿ ವಿಫಲರಾದ ಕಾರಣ 2ನೆ ಅಲೆಯಲ್ಲಿ ಸಾಕಷ್ಟು ಸಂಕಷ್ಟಗಳ ಜತೆಗೆ ಲಾಕ್ಡೌನ್ನ ಪರಿಸ್ಥಿತಿಗೆ ಒಳಗಾಗಬೇಕಾಯಿತು, ಕಷ್ಟ ನಷ್ಟಗಳನ್ನು ಅನುಭವಿಸಬೇಕಾಯಿತು. ಹಾಗಾಗಿ ಈಗ ಅನ್ಲಾಕ್ 3.0ರಲ್ಲಿ ನಾವೆಲ್ಲಾ ಮೈ ಮರೆಯದೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಮ್ಮ ಹಾಗೂ ನಮ್ಮ ಕುಟುಂಬದ ಆರೋಗ್ಯದ ಜವಾಬ್ಧಾರಿಯನ್ನು ಸ್ವತ: ನಿಭಾಯಿಸಬೇಕಾಗಿದೆ. ಜನನಿಬಿಡ ಪ್ರದೇಶಗಳಲ್ಲಿ, ಕೆಲಸದ ಸ್ಥಳಗಳಲ್ಲಿ ನಾವು ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಪಾಡುವುದು ಹಾಗೂ ಮಾಸ್ಕ್ ಧಾರಣೆಯ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡುವ ಜತೆಗೆ ಇತರರಿಗೂ ನಮ್ಮಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಕೋವಿಡ್ ನಿಯಮ ಪಾಲನೆಯನ್ನು ಮಾಡುವ ಮೂಲಕ ನಾವಾಗಿಯೇ ಕೊರೋನ 3ನೆ ಅಲೆಯನ್ನು ತಡೆಯಬೇಕಾಗಿದೆ.
ಬಸ್ ಪ್ರಯಾಣ ದರ ಇಂದು ನಿರ್ಧಾರ
ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಈಗಾಗಲೆ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ದರವನ್ನು ( ಕನಿಷ್ಠ ದರ 10ರೂ.ನಿಂದ 12 ರೂ.ವರೆಗೆ ಸೇರಿದಂತೆ) ಏರಿಕೆ ಮಾಡಲಾಗಿತ್ತು. ಆದರೆ ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ದರ ಏರಿಕೆ ಸಮಂಜಸವಲ್ಲ ಎಂಬ ಆಕ್ಷೇಪವೂ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಆದರೆ ಡೀಸೆಲ್ ದರ 56 ರೂ. ಇದ್ದಾಗ ಏರಿಕೆ ಮಾಡಲಾಗಿದ್ದ ದರ ಈ ಹಿಂದಿನ ಕೆಲ ದಿನಗಳವರೆಗೂ ಅನ್ವಯಿಸಲಾಗಿತ್ತು. ಇದೀಗ ಡೀಸೆಲ್ ದರ 90 ರೂ.ಗೆ ತಲುಪಿದೆ. ಅದಲ್ಲದೆ, ಬಸ್ಸಿನಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಬೇಕಾಗಿದೆ. ಹಾಗಿರುವಾಗ ಹಿಂದಿನ ದರದಲ್ಲಿ ಬಸ್ಸುಗಳ ನಿರ್ವಹಣೆ ಕಷ್ಟ ಸಾಧ್ಯ ಎಂದು ಬಸ್ಸು ಮಾಲಕರು ಕೂಡಾ ಬಸ್ ದರ ಏರಿಕೆಗೆ ಆಗ್ರಹಿಸಿದ್ದಾರೆ.
2019ರಲ್ಲಿ ನಡೆದ ಆರ್ಟಿಎ ಸಭೆಯಲ್ಲಿ ಬಸ್ ದರ ಏರಿಕೆಗೆ ಅವಕಾಶ ಕಲ್ಪಿಸಲಾಗಿದ್ದರೂ, ಕೊರೋನ ಪ್ರಥಮ ಅಲೆಯ ಲಾಕ್ಡೌನ್ ಹಿನ್ನೆಲೆಯಲ್ಲಿ ಏರಿಕೆ ಮಾಡಲಾಗಿರಲಿಲ್ಲ ಎಂಬುದು ಬಸ್ ಮಾಲಕರ ಅಭಿಪ್ರಾಯವಾಗಿದೆ. ಹಾಗಾಗಿ ಬಸ್ ದರ ಏರಿಕೆ ಕುರಿತಂತೆ ಇಂದು ಬಸ್ಸು ಮಾಲಕರ ಸಂಘದ ಪ್ರತಿನಿಧಿಗಳ ಜತೆ ಜಿಲ್ಲಾಡಳಿತ ಸಭೆಯನ್ನು ಕರೆದಿದ್ದು, ಈ ಬಗ್ಗೆ ಇಂದು ಅಂತಿಮ ನಿರ್ಧಾರವಾಗುವ ಸಾಧ್ಯತೆಗಳಿವೆ.