ಪಕ್ಕಲಡ್ಕ : ಬೆಲೆ ಏರಿಕೆಯ ವಿರುದ್ಧ ಸಿಪಿಎಂ ಪ್ರತಿಭಟನೆ
![ಪಕ್ಕಲಡ್ಕ : ಬೆಲೆ ಏರಿಕೆಯ ವಿರುದ್ಧ ಸಿಪಿಎಂ ಪ್ರತಿಭಟನೆ ಪಕ್ಕಲಡ್ಕ : ಬೆಲೆ ಏರಿಕೆಯ ವಿರುದ್ಧ ಸಿಪಿಎಂ ಪ್ರತಿಭಟನೆ](https://www.varthabharati.in/sites/default/files/images/articles/2021/07/5/297618-1625503716.jpg)
ಮಂಗಳೂರು, ಜು. 5: ಲಾಕ್ಡೌನ್ ಅವಧಿಯಲ್ಲಿ ಜನಸಾಮಾನ್ಯರಿಗೆ ಉದ್ಯೋಗವಿಲ್ಲದೆ, ವ್ಯಾಪಾರವಿಲ್ಲದೆ ಬದುಕು ನಡೆಸಲು ಅಸಾಧ್ಯವಾಗದಂತಹ ಪರಿಸ್ಥಿಯಲ್ಲಿರುವಾಗ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ, ಗೃಹ ಉಪಯೋಗಿ ವಸ್ತಗಳ ಬೆಲೆಯನ್ನು ಏರಿಸಿದೆ. ಇದರಿಂದ ದೇಶದ ಜನರ ಬದುಕು ತತ್ತರಗೊಂಡಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಸಿಪಿಎಂ ಮಂಗಳೂರು ನಗರ ಸಮಿತಿಯಿಂದ ನಡೆಸಲ್ಪಡುವ ವಾರಾಚರಣೆಯ ಉದ್ಘಾಟನೆಯ ಭಾಗವಾಗಿ ಪಕ್ಕಲಡ್ಕದಲ್ಲಿ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ ಅಣಕು ಒಲೆಗೆ ಬೆಂಕಿ ಹಚ್ಚಿ ಬಿಸಿ ನೀರು ಕಾಯಿಸುವ ಮೂಲಕ ಪ್ರತಿಭಟನಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಎಂ ಕಂಕನಾಡಿ ಬಿ. ಶಾಖೆಯ ಕಾರ್ಯದರ್ಶಿ ಉದಯ ಕುಂಟಲಗುಡ್ಡೆ, ಸ್ಥಳೀಯ ಸಿಪಿಎಂ ಯುವ ನಾಯಕರಾದ ದೀಪಕ್ ಬಜಾಲ್, ಧೀರಜ್, ನೂರುದ್ದೀನ್, ಮಧುವಂತ್, ಪೃಥ್ವಿ, ಸೋನಿಲ್, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.