ಪುತ್ತೂರು; ಹನಿಟ್ರ್ಯಾಪ್ ಪ್ರಕರಣ: ಮೂವರು ಆರೋಪಿಗಳ ಬಂಧನ
![ಪುತ್ತೂರು; ಹನಿಟ್ರ್ಯಾಪ್ ಪ್ರಕರಣ: ಮೂವರು ಆರೋಪಿಗಳ ಬಂಧನ ಪುತ್ತೂರು; ಹನಿಟ್ರ್ಯಾಪ್ ಪ್ರಕರಣ: ಮೂವರು ಆರೋಪಿಗಳ ಬಂಧನ](https://www.varthabharati.in/sites/default/files/images/articles/2021/07/6/297652-1625512538.jpeg)
ಪುತ್ತೂರು: ಪುತ್ತೂರಿನ ಯುವಕನನ್ನು ಹನಿಟ್ರ್ಯಾಪ್ ನಡೆಸಿ ಆತನಿಂದ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು 3 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ನಿವಾಸಿ ಶಾಫಿ (34), ಸವಣೂರು ಗ್ರಾಮದ ಅತ್ತಿಕೆರೆ ನಿವಾಸಿ ಅಝರುದ್ದೀನ್(30) ಮತ್ತು ಮಾಂತೂರು ನಿವಾಸಿ ನಝೀರ್ (38) ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 7.05 ಲಕ್ಷ ರೂ. ನಗದು, ಕಾರು, ಅಟೋರಿಕ್ಷಾ ಮತ್ತು 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಬಂಟ್ವಾಳ ನಿವಾಸಿ ತನಿಷಾ ರಾಜ್ ಎಂಬಾಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಟ್ಟಣಿಗೆ ಮುಡ್ನೂರು ಗ್ರಾಮದ ಬೀಚಗದ್ದೆ ನಿವಾಸಿ ಯುವಕನಿಗೆ ಮೊಬೈಲ್ ಮೂಲಕ ಹನಿಟ್ರ್ಯಾಪ್ ನಡೆಸಿದ ತಂಡ ಆತನಿಗೆ ಬೆದರಿಕೆಯೊಡ್ಡಿ 30 ಲಕ್ಷ ರೂ. ವಸೂಲಿ ಮಾಡಿರುವುದಾಗಿ ಆತ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುತ್ತೂರು ಡಿವೈಎಸ್ ಪಿ ಗಾನ ಪಿ ಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದರು.