ಬೆಂಗರೆ: ಕೋಸ್ಟಲ್ ಬರ್ತ್, ಸಾಗರ ಮಾಲಾ ಯೋಜನೆಯ ವಿರುದ್ದ ಜುಲೈ 9 ರಂದು ಮೀನುಗಾರರಿಂದ 'ದೋಣಿಯೊಂದಿಗೆ ಪ್ರತಿಭಟನೆ'
ಮಂಗಳೂರು, ಜು.7: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸಾಗರ ಮಾಲಾ ಯೋಜನೆಯು ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನುಗಾರ ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ನಗರದ ಬೆಂಗರೆಯ ಪಲ್ಗುಣಿ ನದಿ ತೀರದಲ್ಲಿ ಸಾಗರ ಮಾಲಾ ಯೋಜನೆಯಡಿ ದೇಶೀಯ ಹಡಗುಗಳ ನಿಲುಗಡೆಗಾಗಿ ಕೋಸ್ಟಲ್ ಬರ್ತ್ 100 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಬಲವಾದ ಹೊಡೆತ ನೀಡುತ್ತದೆ. ದುಡಿಮೆಯ ಅವಕಾಶವನ್ನು ನಾಶಗೊಳಿಸುತ್ತದೆ. ಮೀನುಗಾರರ ಬದುಕಿಗೆ ಮಾರಕವಾದ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು ಜು.9ರಂದು ಬೆಳಗ್ಗೆ 9ಕ್ಕೆ ಬೆಂಗರೆಯಲ್ಲಿ ದೋಣಿಯೊಂದಿಗೆ ಹಾಗೂ ಮೀನುಗಾರರ ಮನೆಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಗಾಗಲೆ ಕಾರವಾರ, ಹೊನ್ನಾವರ ಮತ್ತಿತರ ಕಡೆ ಸಾಗರ ಮಾಲಾ ಯೋಜನೆಯ ಅಪಾಯಗಳ ವಿರುದ್ದ ಧ್ವನಿ ಎತ್ತಿದ ಮೀನುಗಾರರ ಮೇಲೆ ಸರಕಾರ ಬಲಪ್ರಯೋಗ ನಡೆಸುತ್ತಿದೆ. ಬೇರೆ ಬೇರೆ ಹೆಸರುಗಳಲ್ಲಿ ಕರ್ನಾಟಕದ ಸಮುದ್ರ ತೀರದ ಉದ್ದಕ್ಕೆ ಸಾಗರ ಮಾಲಾ ಯೋಜನೆ ಕಾರ್ಯಕತಗೊಳಿಸಲು ಸರಕಾರಗಳು ನಿರ್ಧರಿಸಿವೆ. ಸಾಗರ ಮಾಲಾ ಹಾಗೂ ಅದರಡಿ ರೂಪುಗೊಳ್ಳುತ್ತಿರುವ ಯೋಜನೆಗಳೆಲ್ಲವೂ ಮೀನುಗಾರರ ವೃತ್ತಿ ಹಾಗೂ ವಸತಿಗಳ ಪಾಲಿಗೆ ಜಾರಿಯ ಸಂದರ್ಭ ಕಂಟಕವಾಗಲಿವೆ. ಈಗಾಗಲೆ ಜಾರಿಗೆ ಮುಂದಾಗಿರುವ ಕಾರವಾರ, ಹೊನ್ನಾವರ, ಮಂಗಳೂರಿನ ಬೆಂಗರೆ ಪ್ರದೇಶದಲ್ಲಿ ಇದು ಸ್ಪಷ್ಟಗೊಂಡಿವೆ. ಸಾಗರ ಮಾಲಾ ಯೋಜನೆಯ ಸ್ವರೂಪವೇ ಪಾರಂಪರಿಕವಾಗಿ ಶತಮಾನಗಳಿಂದ ಮೀನುಗಾರಿಕೆ ನಡೆಸುತ್ತಾ ಬಂದಿರುವ ಮೀನುಗಾರ ಸಮುದಾಯಗಳ ಹಿಡಿತವನ್ನು ತಪ್ಪಿಸಿ ಕೋಟ್ಯಂತರ ವ್ಯವಹಾರದ ಮೀನುಗಾರಿಕೆಯನ್ನು ಕಾರ್ಪೊರೇಟ್ ಕಂಪೆನಿಗಳ ಪಾಲಾಗಿಸುವ ಹುನ್ನಾರ ಹೊಂದಿದೆ ಎಂದು ತಿಳಿಸಿದ್ದಾರೆ.
ಬೆಂಗರೆಯ ಪಲ್ಗುಣಿ ನದಿ ತೀರದಲ್ಲಿ ಕೋಸ್ಟಲ್ ಬರ್ತ್ ಹೆಸರಿನಲ್ಲಿ ಸಾಗರ ಮಾಲಾ ಯೋಜನೆಯ ಕಾಮಗಾರಿಯು ಗ್ರಾಮಸ್ಥರ ವಿರೋಧದ ನಡುವೆಯೂ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಐದು ಸಾವಿರ ಟನ್ ಸಾಮರ್ಥ್ಯದ ದೇಶೀಯ ಹಡಗುಗಳ ಪ್ರವೇಶದ ಅವಕಾಶ ಹೊಂದಿರುವ ಬರ್ತ್ಗಾಗಿ ಯೋಜನೆ ಪ್ರದೇಶದಲ್ಲಿ ನದಿಯನ್ನು ಏಳು ಮೀ. ಆಳಗೊಳಿಸಲಾಗುತ್ತಿದೆ. ಇದರಿಂದಾಗಿ ಇಲ್ಲಿ ನೀರಿನ ಹರಿವಿನ ವೇಗ ಹೆಚ್ಚಳಗೊಂಡು ದೋಣಿಗಳು ನದಿಯಲ್ಲಿ ಸಮತೋಲನ ಕಳೆದುಕೊಳ್ಳುವ ಮತ್ತು ಇಲ್ಲಿ ಹೇರಳವಾಗಿ ಲಭ್ಯವಾಗುವ ಮರುವಾಯಿ, ಕಪ್ಪೆಚಿಪ್ಪು, ಕಾನೆ, ಏಡಿ ಮುಂತಾದ ಜಲಚರಗಳ ಸಂತಾನೋತ್ಪತ್ತಿಯು ನಾಶಗೊಂಡು ಅವುಗಳ ಲಭ್ಯತೆ ನಷ್ಟಗೊಳ್ಳುವ ಭೀತಿ ಎದುರಾಗಿದೆ. ಮಖ್ಯವಾಗಿ ಬರ್ತ್ ನಿರ್ಮಾಣಕ್ಕಾಗಿ ನಾಡದೋಣಿಗಳು ತಂಗುವ ನದಿ ತೀರದ ಜಾಗ ಕೋಸ್ಟಲ್ ಬರ್ತ್ ಯೋಜನೆಯ ಪ್ರದೇಶಕ್ಕೆ ಒಳಪಡಿಸಲಾಗಿದ್ದು, ಇಲ್ಲಿ ತಂಗುವ ದೊಡ್ಡ ಸಂಖ್ಯೆಯ ದೋಣಿಗಳು ತಂಗುದಾಣದ ಜೊತೆಗೆ ಮೀನುಗಾರಿಕೆಯ ದುಡಿಮೆಯನ್ನು ಶಾಶ್ವತವಾಗಿ ಕಳೆದುಕೊಳ್ಳಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಕಾರಣಕ್ಕೂ ಸಾಂಪ್ರದಾಯಿಕ ಮೀನುಗಾರರ ದೋಣಿ ತಂಗುವ ನದಿ ತೀರವನ್ನು ಹಾಗೂ ಅವರ ವಸತಿಗಳನ್ನು ಆಕ್ರಮಿಸಬಾರದು, ಪರಿಸರ ರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸಾಂಪ್ರದಾಯಿಕ ಮೀನುಗಾರಿಕೆಗೆ ಅಪಾಯ ಒಡ್ಡುವ, ಮೀನು, ಮರುವಾಯಿ, ಏಡಿ, ಚಿಪ್ಪುಗಳ ಸಂತತಿ ಉತ್ಪತ್ತಿ ತಾಣಗಳನ್ನು ನಾಶಗೊಳಿಸುವ ಸಾಗರ ಮಾಲಾ ಕೋಸ್ಟಲ್ ಬರ್ತ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.