ಸಾಗರ ಮಾಲಾ ಯೋಜನೆ ವಿಚಾರ: ಡಿವೈಎಫ್ಐ-ಎಸ್ಡಿಪಿಐ ಕಾರ್ಯಕರ್ತರ ಮಧ್ಯೆ ಹೊಡೆದಾಟ
ಪಣಂಬೂರು ಠಾಣೆಯಲ್ಲಿ ಪರಸ್ಪರ ದೂರು ದಾಖಲು
ಮಂಗಳೂರು, ಜು.7: ಸಾಗರ ಮಾಲಾ ಯೋಜನೆಯ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಸೇರಿದ್ದ ವೇಳೆ ಡಿವೈಎಫ್ಐ-ಎಸ್ಡಿಪಿಐ ಕಾರ್ಯಕರ್ತರ ಮಧ್ಯೆ ಹೊಡೆದಾಡಿಕೊಂಡ ಘಟನೆ ಮಂಗಳವಾರ ರಾತ್ರಿ ಬೆಂಗರೆಯಲ್ಲಿ ನಡೆದಿದೆ.
ಡಿವೈಎಫ್ಐ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಹಾಗೂ ಮಂಗಳೂರು ನಗರ ಡಿವೈಎಫ್ಐ ಉಪಾಧ್ಯಕ್ಷ ಎ.ಬಿ.ನೌಶಾದ್ ದೂರು ನೀಡಿ ‘ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಬೆಂಗರೆಯ ಮೊಹಿಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಬೆಂಗರೆ ನದಿತೀರದಲ್ಲಿ ಕೋಸ್ಟಲ್ ಬರ್ತ್ ಎಂಬ ಯೋಜನೆಯಿಂದ ಊರಿಗಾಗುವ ಸಮಸ್ಯೆ ಬಗ್ಗೆ ಮಸೀದಿ ಅಧ್ಯಕ್ಷ ಅಸ್ಲಾಂರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಕೋಸ್ಟಲ್ ಬರ್ತ್ ಯೋಜನೆಯ ಬಗ್ಗೆ ತಾನು ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗ ಎಸ್ಡಿಪಿಐ ಕಾರ್ಯಕರ್ತ ವದೂದು ಎಂಬಾತನು ಕೈಯಿಂದ ಹಲ್ಲೆ ನಡೆಸಿದ್ದಾನೆ. ಆತನ ಜೊತೆಗೂಡಿದ ಕಬೀರ್ ಎಂಬಾತನು ತನಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ತಾನು ಮಸೀದಿಯಿಂದ ಹೊರಗಡೆ ಹೋಗುವಾಗ ಎಸ್ಡಿಪಿಐ ಕಾರ್ಯಕರ್ತರನ್ನು ಸೇರಿಸಿ ತಡೆದು ನಿಲ್ಲಿಸಿ ಗುಂಪು ಘರ್ಷಣೆಗೆ ಉತ್ತೇಜನ ನೀಡಿದ್ದಾರೆ. ಹೀಗೆ ಅಕ್ರಮ ಕೂಟ ಸೇರಿಸಿ ಅಶಾಂತಿ ಸೃಷ್ಟಿಸಲು ಎಸ್ಡಿಪಿಐ ಮುಖಂಡ ಅನೀಶ್ ಎಂಬಾತನು ಪ್ರೆರೇಪಿಸಿರುತ್ತಾನೆ. ತನ್ನ ಮೇಲೆ ಹಲ್ಲೆ ಮಾಡಿ, ತನಗೆ ಜೀವ ಬೆದರಿಕೆ ಒಡ್ಡಿ, ಪ್ರದೇಶ ಶಾಂತಿ ನೆಮ್ಮದಿ ಕದಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಎಸ್ಡಿಪಿಐ ಕಾರ್ಯಕರ್ತ ವದೂದ್ ದೂರು ನೀಡಿ ‘ಮಂಗಳವಾರ ರಾತ್ರಿ 7:30ರ ವೇಳೆಗೆ ಬೆಂಗ್ರೆಯ ಅಲ್ ಮದ್ರಸತುಲ್ ದೀನೀಯ ಎಸೋಸಿಯೇಶನ್ನ ಅಧ್ಯಕ್ಷ್ಯ ಅಸ್ಲಾಂ ಬೆಂಗರೆಯ ನೇತೃತ್ವದಲ್ಲಿ ನಡೆಯುತ್ತಿದ್ದ ಸಾಗರ ಮಾಲ ಯೋಜನೆಗೆ ಸಂಬಂಧಿಸಿದ ಸಭೆಯ ಮಧ್ಯದಲ್ಲಿ ನೌಶಾದ್ ಎಂಬವರು ಕಳೆದು ಹೋದ ವಿಚಾರವನ್ನು ಪ್ರಸ್ತಾಪಿಸಿದಾಗ ಜಮಾಅತ್ ಅಧ್ಯಕ್ಷ ಅಸ್ಲಾಂ, ಉಪಾಧ್ಯಕ್ಷ ಸುಲೇಮಾನ್ ಮತ್ತು ಕಾರ್ಪೊರೇಟರ್ ಮುನೀಬ್ ಅವರು ನೌಶಾದ್ರ ಬಳಿ ಕಳೆದು ಹೋದ ವಿಚಾರ ಪ್ರಸ್ತಾಪಿಸುವುದು ಬೇಡ ಎಂದು ಕೇಳಿಕೊಂಡರು. ನೌಶಾದ್ ವಿಷಯ ಪ್ರಸ್ತಾಪಿಸುತ್ತಿರುವಾಗ ತಾನು ತಡೆದೆ. ಆವಾಗ ನೌಶದ್ ತನ್ನನ್ನು ಅವಾಚ್ಯ ಶಬ್ದದಿಂದ ನಿಂದಿಸಿ, ತನ್ನ ತಂದೆ ತಾಯಿಗೆ ಬೈದು ಹಲ್ಲೆ ಮಾಡಿದ್ದಾರೆ. ಸಭೆ ಮುಕ್ತಾಯಗೊಂಡ ಬಳಿಕ ತಾನು ಹೊರಗಡೆ ಬಂದಾಗ ನೌಶಾದ್, ಮುಆಝ್, ಮನ್ಸೂರ್, ಬಿಲಾಲ್, ಹನೀಫ್, ತಂಝೀಲ್, ಇಮ್ರಾನ್ ಸೋಡಾ, ಫಯಾಝ್, ರಿಝ್ವಾನ್, ಯಹ್ಯಾ ಎಂಬುವರು ತನ್ನನ್ನು ತಡೆದು ಕೈಯಲ್ಲಿ ಹಲ್ಲೆ ಮಾಡಿರುತ್ತಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.