ಕೃಷಿಯನ್ನು ರೈತ ಸ್ನೇಹಿಯಾಗಿಸಿ: ಸಚಿವೆ ಶೋಭಾಗೆ ಕಾಂಗ್ರೆಸ್ ಸಲಹೆ
ಉಡುಪಿ, ಜು.8: ನರೇಂದ್ರ ಮೋದಿ ಸರಕಾರದಲ್ಲಿ ನೂತನ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆಯಾಗಿ ನಿಯುಕ್ತಿಗೊಂಡಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಅಭಿನಂದಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್, ಕೃಷಿಯನ್ನು ರೈತ ಸ್ನೇಹಿಯಾಗಿಸಲು ಸಚಿವೆ ಆದ್ಯತೆ ನೀಡಲಿ ಎಂದು ಸಲಹೆ ನೀಡಿದೆ.
ಶೋಭಾರನ್ನು ಅಭಿನಂದಿಸಿ ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಪ್ರಸ್ತುತ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೃಷಿ ಕಾಯ್ದೆ ರೈತ ವಿರೋಧಿಯಾಗಿದೆ. ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು.
ಭಾರತದ ಆರ್ಥಿಕತೆ ಕೃಷಿ ಅವಲಂಬಿತವಾಗಿದೆ ಎನ್ನುವ ಸತ್ಯವನ್ನು ಆಳುವ ಸರಕಾರ ಅರ್ಥ ಮಾಡಿಕೊಳ್ಳಬೇಕು. ಕಳೆದ ಬಜೆಟ್ನಲ್ಲಿ ಕೃಷಿ ವಲಯಕ್ಕೆ (ಪಶು ಸಂಗೋಪನೆ, ಮತ್ಸೋದ್ಯಮ, ಪೌಲ್ಟ್ರಿ ಸೇರಿ)16.5 ಕೋಟಿ ರೂ. ಮೀಸಲಿಟ್ಟಿದ್ದು ಸುಮಾರು 18 ಕೋಟಿ ರೈತರನ್ನು ಹೊಂದಿರುವ ಈ ದೇಶಕ್ಕೆ ಇದು ಪೂರಕವಲ್ಲ. ರಸಗೊಬ್ಬರಗಳ ಬೆಲೆ ಇಳಿಕೆಯಾಗಬೇಕು. ಕೃಷಿ ಉಳುಮೆ ಟ್ರಾಕ್ಟರ್ಗಳಿಗೆ ಕನಿಷ್ಟ ಸಬ್ಸಿಡಿ ನೀಡಬೇಕು. ಕೃಷಿ ಯಂತ್ರಗಳ ಬೆಲೆಯನ್ನು ಇಳಿಸುವ ಮೂಲಕ ಕೃಷಿಯನ್ನು ರೈತ ಸ್ನೇಹಿಯಾಗಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭೂ ಸುಧಾರಣಾ ಮಸೂದೆಯಡಿಯಲ್ಲಿ ದೊರೆತ ಭೂಮಿಯನ್ನು ಮಾರುವ ಅವಕಾಶ ಕಲ್ಪಿಸಿರುವುದರಿಂದ ಹೊಸ ಹೊಸ ಭೂಮಾಲಕರ ಹುಟ್ಟಿಕೊಳ್ಳಲಿದ್ದು, ಇದು ಕೃಷಿಯನ್ನು ಕಾರ್ಪೋರೇಟ್ ವಲಯದೊಳಗೆ ಸೇರ್ಪಡಿಸುವ ಹುನ್ನಾರ ವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಎಪಿಎಂಸಿ ಸ್ವಾಯತ್ತತೆಯನ್ನು ಎತ್ತಿ ಹಿಡಿಯಬೇಕು ಹಾಗೂ ಕೃಷಿಯುತ್ಪನ್ನಗಳನ್ನು ಖರೀದಿಸುವ ಪೂರ್ಣಾಧಿಕಾರ ವನ್ನು ಸ್ಥಳೀಯ ಎಪಿಎಂಸಿ ಗಳಿಗೆ ನೀಡಬೇಕು ಎಂದು ಹೇಳಿದ್ದಾರೆ.
ಕಿರು ನೀರಾವರಿ ಯೋಜನೆಗಳಿಗೆ ಆಧ್ಯತೆ ನೀಡಬೇಕು. ನೀರಿನ ಒರತೆ ಇರುವ ಜಮೀನುಗಳನ್ನು 94ಸಿ ಅಥವಾ ಯಾವುದೇ ಸರಕಾರಿ ಯೋಜನೆಗಳಿಗೆ ಒಳಪಡಿಸಬಾರದು. ಈ ಪ್ರದೇಶಗಳನ್ನು ನೀರಾವರಿ ವ್ಯಾಪ್ತಿಯಡಿ ಸೇರಿಸಬೇಕು. ಈಗಿರುವಂತೆ ಕೃಷಿ ಪಂಪುಸೆಟ್ಗಳಿಗೆ ಉಚಿತ ವಿದ್ಯುತ್ ಸರಬರಾಜು ವ್ಯವಸ್ಥೆ ಯನ್ನು ಮುಂದುವರಿಸಬೇಕು ಎಂದವರು ನೂತನ ಸಚಿವೆಯಲ್ಲಿ ಮನವಿ ಮಾಡಿದ್ದಾರೆ.
ಹೊಸದಿಲ್ಲಿಯಲ್ಲಿ ಕಳೆದ ಸುಮಾರು 325 ದಿನಗಳಿಂದ ಪ್ರತಿಭಟಿನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಮನ್ನಿಸಿ, ರೈತ ರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆದುಕೊಂಡು ತಮ್ಮ ಅವಧಿಯಲ್ಲಿ ಕೃಷಿಕರು ಗೌರವಯುತ ಜೀವನ ನಡೆಸುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಅಶೋಕ್ ಕುಮಾರ್ ಕೊಡವೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.