ಮಂಗಳೂರು; ವರದಕ್ಷಿಣೆ ಕಿರುಕುಳ ಆರೋಪ : ಮಹಿಳೆ ಆತ್ಮಹತ್ಯೆ

ಮಂಗಳೂರು, ಜು.8: ಗಂಡನ ಮನೆಯವರ ನಿರಂತರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪ್ರೀತಿ ಪಾಂಡೆ (26) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರೀತಿ ಪಾಂಡೆಗೆ ಉತ್ತರ ಪ್ರದೇಶ ಮೂಲದ ರಾಕೇಶ್ ಓಝಾ ಎಂಬಾತನ ಜತೆ 2020ರ ನವೆಂಬರ್ 20ರಂದು ಮದುವೆಯಾ ಗಿತ್ತು. ಬಳಿಕ ಪ್ರೀತಿ ಪಾಂಡೆಯೊಂದಿಗೆ ಮಾವ, ಅತ್ತೆ, ಮೈದುನ, ನಾದಿನಿ ಸಹಿತ ಕುಟುಂಬದ ಎಲ್ಲರೂ ಮಂಗಳೂರಿನಲ್ಲೇ ವಾಸ್ತವ್ಯ ಹೊಂದಿದ್ದರು. ಈ ವೇಳೆ ಪ್ರೀತಿ ಪಾಂಡೆಯ ಪೋಷಕರ ಬಳಿ 5 ಲಕ್ಷ ರೂ. ಹಣ ಮತ್ತು ನಾಲ್ಕು ಚಕ್ರದ ವಾಹನವನ್ನು ವರದಕ್ಷಿಣೆಯಾಗಿ ನೀಡಬೇಕು, ಇಲ್ಲದಿದ್ದರೆ ಪ್ರೀತಿ ಪಾಂಡೆಯನ್ನು ಕೊಲ್ಲುವುದಾಗಿ ರಾಕೇಶ್ ಓಝಾನ ಕಡೆಯವರು ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ.
ಈ ವಿಚಾರದಲ್ಲಿ ಪ್ರೀತಿ ಪಾಂಡೆಯ ಮನೆಯವರು ಕಾಲಾವಕಾಶ ಕೇಳಿದ್ದರು. ಕೆಲಕಾಲ ಸುಮ್ಮನಿದ್ದ ಓಝಾನ ಮನೆಯವರು ಬಳಿಕ ಪ್ರೀತಿ ಪಾಂಡೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡ ತೊಡಗಿದರು ಎಂದು ಆಪಾದಿಸಲಾಗಿದೆ. ಇದರಿಂದ ಬೇಸತ್ತ ಪ್ರೀತಿ ಪಾಂಡೆ ಜು.6ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರೀತಿ ಪಾಂಡೆಯ ಸಹೋದರಿ ಶಶಿಭೂಷನ್ ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







