ಮೈಸೂರು ಡಿಸಿ ವರ್ಗಾವಣೆ ವಿವಾದ: ವರ್ಗಾವಣೆಗೆ ಮಂಡಳಿ ರಚಿಸಲು ಹೈಕೋರ್ಟ್ ಆದೇಶ

ಬಿ.ಶರತ್
ಬೆಂಗಳೂರು, ಜು.8: ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ಅವಧಿ ಪೂರ್ವ ವರ್ಗಾವಣೆ ಮಾಡಿದ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ನಾಗರಿಕ ಸೇವಾ ಮಂಡಳಿ ರಚಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಸಿಎಟಿ ಆದೇಶ ಪ್ರಶ್ನಿಸಿ ಬಿ.ಶರತ್ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. ಅಧಿಕಾರಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಿದ ಕ್ರಮವನ್ನು ಕಾನೂನು ರೀತಿ ಮರುಪರಿಶೀಲನೆ ಮಾಡುವಂತೆ ನಿರ್ದೇಶಿಸಿರುವ ಪೀಠ, ಸಿಎಟಿ ಆದೇಶವನ್ನೂ ಎತ್ತಿ ಹಿಡಿದಿದೆ. ಹಾಗೆಯೇ, ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಂದಿನ ಎರಡು ತಿಂಗಳಲ್ಲಿ ನಾಗರಿಕ ಸೇವಾ ಮಂಡಳಿ ರಚಿಸುವಂತೆ ಸರಕಾರಕ್ಕೆ ಆದೇಶಿಸಿದೆ.
ಏನಿದು ಪ್ರಕರಣ: ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ಬಿ.ಶರತ್ ಅವರನ್ನು ಅವಧಿಗೆ ಮುನ್ನವೇ ವರ್ಗಾವಣೆ ಮಾಡಿತ್ತು. 2020ರ ಆ.29ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ. ಶರತ್ ಅವರನ್ನು ಸೆ.28ರಂದು, ಅಂದರೆ ಒಂದು ತಿಂಗಳು ತುಂಬುವ ಮುನ್ನವೇ ಹುದ್ದೆಯಿಂದ ತೆರವುಗೊಳಿಸಿತ್ತು. ಸರಕಾರದ ಈ ಕ್ರಮ ಆಕ್ಷೇಪಿಸಿದ್ದ ಬಿ.ಶರತ್ ಅಕ್ಟೋಬರ್ ಮೊದಲ ವಾರದಲ್ಲಿ ಸಿಎಟಿ ಮೆಟ್ಟಿಲೇರಿದ್ದರು.
ಸೇವಾ ನಿಯಮಗಳನ್ನು ಉಲ್ಲಂಘಿಸಿ 2 ವರ್ಷ ತುಂಬುವ ಮೊದಲೇ ತನ್ನನ್ನು ವರ್ಗಾವಣೆ ಮಾಡಿರುವ ಸರಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ 2021ರ ಮಾ.29ರಂದು ಆದೇಶ ನೀಡಿ, ಶರತ್ ವರ್ಗಾವಣೆಯನ್ನು ಸಕ್ಷಮ ಪ್ರಾಧಿಕಾರ ಮರುಪರಿಶೀಲಿಸಬೇಕು ಹಾಗೂ ಅಧಿಕಾರಿಗಳ ವರ್ಗಾವಣೆಗೆ ನಾಗರಿಕ ಸೇವಾ ಮಂಡಳಿ ರಚಿಸಬೇಕು ಎಂದು ನಿರ್ದೇಶಿಸಿತ್ತು.







