ಟ್ವೀಟರ್ ಇಂಡಿಯಾ ಎಂಡಿಗೆ ನೋಟಿಸ್: ಮಾ.13ರಂದು ಹೈಕೋರ್ಟ್ ಆದೇಶ

ಬೆಂಗಳೂರು, ಜು.9: ವಿವಾದಿತ ವಿಡಿಯೋ ಪ್ರಕರಣದಲ್ಲಿ ಟ್ವೀಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ನೋಟಿಸ್ ಜಾರಿಗೊಳಿಸಿರುವ ಉತ್ತರ ಪ್ರದೇಶ ಪೊಲೀಸರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಜು.13ರಂದು ಡಿಕ್ಟೇಷನ್ ನೀಡುವುದಾಗಿ ತಿಳಿಸಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಗಾಜಿಯಾಬಾದ್ನ ಲೋನಿ ಬಾರ್ಡರ್ ಠಾಣೆ ಪೆÇಲೀಸರು ನೀಡಿರುವ ನೋಟಿಸ್ ರದ್ದು ಕೋರಿ ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಯುಪಿ ಪೊಲೀಸರ ಪರ ವಾದ ಮಂಡಿಸಿದ ವಕೀಲ ಪಿ. ಪ್ರಸನ್ನ ಕುಮಾರ್ ಅವರು, ನೋಟಿಸ್ ನೀಡಿರುವ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಇದೇ ವೇಳೆ ಅರ್ಜಿದಾರ ಮನೀಶ್ ಮಹೇಶ್ವರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಪೊಲೀಸರು ಆನ್ ಲೈನ್ ಬದಲು ಖುದ್ದು ಠಾಣೆಗೆ ಹಾಜರಾಗಿ ಹೇಳಿಕೆ ನೀಡಬೇಕೆನ್ನುತ್ತಿರುವ ಕ್ರಮಕ್ಕೆ ಆಕ್ಷೇಪಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಜು.13ರಂದು ಆದೇಶದ ಉಕ್ತಲೇಖನ ನೀಡುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.
ಪ್ರಕರಣವೇನು: ಗಾಜಿಯಾಬಾದ್ನಲ್ಲಿ ತಾಯಿತ ಮಾರುವ ಮುಸ್ಲಿಂ ವೃದ್ಧನೋರ್ವನಿಗೆ ಆರು ಜನರ ಗುಂಪು ಥಳಿಸಿ ಆತನ ಗಡ್ಡ ಕತ್ತರಿಸಿ, ಬಲವಂತವಾಗಿ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಎಂದು ಹೇಳಿಸಿದ್ದರೆನ್ನಲಾದ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಹಾಕಲಾಗಿತ್ತು. ಈ ಸಂಬಂಧ ಗಾಜಿಯಾಬಾದ್ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಗಲಭೆಗೆ ಪ್ರಚೋದಿಸಿದ್ದಾರೆ, ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ್ದಾರೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿದ್ದಾರೆ, ಕಿಡಿಗೇಡಿತನ ಹಾಗೂ ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಎಂಬ ಆರೋಪಗಳಡಿಯಲ್ಲಿ, ಐಪಿಸಿ ಸೆಕ್ಷನ್ಗಳಾದ 153, 153 ಎ, 295 ಎ, 505, 120 ಬಿ ಮತ್ತು 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಜತೆಗೆ ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮನೀಶ್ ಮಹೇಶ್ವರಿ ಅವರಿಗೆ ಸಿಆರ್ಪಿಸಿ ಸೆಕ್ಷನ್ 41(ಎ) ಅಡಿ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಮನೀಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.





