ಬ್ರಹ್ಮಾವರ: ಮರಣಪತ್ರ ಬರೆದು ವೃದ್ಧ ನಾಪತ್ತೆ
![ಬ್ರಹ್ಮಾವರ: ಮರಣಪತ್ರ ಬರೆದು ವೃದ್ಧ ನಾಪತ್ತೆ ಬ್ರಹ್ಮಾವರ: ಮರಣಪತ್ರ ಬರೆದು ವೃದ್ಧ ನಾಪತ್ತೆ](https://www.varthabharati.in/sites/default/files/images/articles/2021/07/9/298212-1625849767.jpg)
ಬ್ರಹ್ಮಾವರ, ಜು.9: ಇಲ್ಲಿನ ಬೈಕಾಡಿ ಗ್ರಾಮದ ಕಾಮೇಶ್ವರ ದೇವಸ್ಥಾನ ವಠಾರದ ನಿವಾಸಿ ಶ್ರೀಧರ ಮಯ್ಯ (60) ಎಂಬವರು ಗುರುವಾರ ಸಂಜೆ 5:15ಕ್ಕೆ ಚಿಕ್ಕಮಗಳೂರಿನಲ್ಲಿ ಕೋರ್ಟ್ ಕೇಸ್ ಮುಗಿಸಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ ಬಳಿಕ ನಾಪತ್ತೆಯಾಗಿದ್ದಾರೆ. ಆದರೆ ಅದೇ ದಿನ ಸಂಜೆ 6:30ರ ಸುಮಾರಿಗೆ ತಾನು ಸಾಯುತ್ತಿರುವುದಾಗಿ ಬರೆದ ರಿಜಿಸ್ಟರ್ಡ್ ಪತ್ರ ಕಾಮೇಶ್ವರ ದೇವಸ್ಥಾನಕ್ಕೆ ಬಂದಿದ್ದು, ಬಳಿಕ ಎಲ್ಲಾ ಕಡೆ ಹುಡುಕಿದರೂ ಎಲ್ಲೂ ಪತ್ತೆಯಾಗಿಲ್ಲ.
ಶ್ರೀಧರ ಮಯ್ಯ ಅವರು ವಿಪರೀತ ಕಾಲು ನೋವು ಮತ್ತು ಬಿಕ್ಕಳಿಕೆ ಸಮಸ್ಯೆಯಿಂದ ನರಳುತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಜು.8ರ ಸಂಜೆ 5:15ಕ್ಕೆ ಕೋರ್ಟ್ ಕೇಸಿಗಾಗಿ ಚಿಕ್ಕಮಗಳೂರಿಗೆ ಹೋಗುತಿದ್ದು, ನಾಲ್ಕು ದಿನಗಳ ಬಳಿಕ ಬರುವುದಾಗಿ ಮಗಳು ನವ್ಯರಲ್ಲಿ ತಿಳಿಸಿ ತೆರಳಿದ್ದರು. ಇವರು ತೆರಳಿದ ಬಳಿಕ ಮಯ್ಯ ಬರೆದ ಪತ್ರ ದೇವಸ್ಥಾನಕ್ಕೆ ಬಂದಿದ್ದು, ಇದರಲ್ಲಿ ನನ್ನ ಆರೋಗ್ಯ ತುಂಬಾ ಕೆಳಮಟ್ಟದಲ್ಲಿದೆ. ವಿಪರೀತ ಕಾಲುನೋವು ಹಾಗೂ ವಿಪರೀತ ಬಿಕ್ಕಳಿಕೆಯಿಂದ ಬದುಕಿನಲ್ಲಿ ಜಿಗುಪ್ಸೆಗೊಂಡಿದ್ದು, ಜೀವವೇ ಬೇಡವೆನಿಸಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ದೇವಸ್ಥಾನದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿತ್ತು.
ಇದಾದ ಬಳಿಕ ಮನೆಯವರು ಹಾಗೂ ಗ್ರಾಮಸ್ಥರು ಸೇರಿ ಶ್ರೀಧರ ಮಯ್ಯರಿಗಾಗಿ ಎಲ್ಲಾ ಕಡೆ ಹುಡುಕಿದ್ದರೂ ಇನ್ನೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.