ಎದುರಾಳಿಗಳ ತಂತ್ರಕ್ಕೆ ಬಲಿಯಾಗದಂತೆ ಸ್ವಯಂ ಸಹನೆ ನಮ್ಮ ಕರ್ತವ್ಯ: ಜೆಡಿಎಸ್ ಕಾರ್ಯಕರ್ತರಿಗೆ ವೈಎಸ್ವಿ ದತ್ತ ಪತ್ರ

ಬೆಂಗಳೂರು, ಜು. 10: `ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿ ಕೆರಳಿಸಿ, ನಮ್ಮಿಂದಲೇ ನಮ್ಮ ಪಕ್ಷದ ವರ್ಚಸ್ಸು ಕಡಿಮೆಯಾಗುವಂತಹ ನಮ್ಮ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯವಾಗಿದೆ' ಎಂದು ಮಾಜಿ ಶಾಸಕ ವೈಎಸ್ವಿ ದತ್ತ, ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
''ಈಗ ಕೆಲವು ದಿನಗಳಿಂದ ನಡೆಯುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಮತ್ತು ಮಂಡು ಸಂಸದೆ ಸುಮಲತಾ ಅವರ ನಡುವಿನ ಸಂಘರ್ಷ, ಕಾರ್ಯಕರ್ತರಾದ ನಿಮಗೆ ಸಹಜವಾಗಿ ಬೇಸರ ಮತ್ತು ನೋವು ತರಿಸಿದೆ ಎಂಬುದನ್ನು ನಾನು ಬಲ್ಲೆ. ಪಕ್ಷದ ವರಿಷ್ಠ ನಾಯಕರೊಬ್ಬರ ಬಗ್ಗೆ ಪ್ರತಿಕ್ರಿಯೆಗಳು ಪ್ರಕಟವಾದಾಗ ನೀವು ಸಹಜವಾಗಿ ತತ್ಕ್ಷಣದ ಆವೇಶಕ್ಕೆ ಒಳಗಾಗುತ್ತೀರಿ. ಇದು ಸಹಜವೆಂದು ಭಾವಿಸಿದರೂ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದಲೂ ನಾವು ತಣ್ಣಗೆ ಚಿಂತಿಸಬೇಕಾಗುತ್ತದೆ'' ಎಂದು ಅವರು ಉಲ್ಲೇಖಿಸಿದ್ದಾರೆ.
''ಜನ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಿಜೆಪಿ ನೇತೃತ್ವದ ಆಡಳಿತ ವೈಫಲ್ಯಗಳ ಸರಮಾಲೆ, ಜನವಿರೋಧಿ ನಿರ್ಧಾರಗಳು, ಅಸಹನೀಯ ಬೆಲೆ ಏರಿಕೆ ಇವುಗಳಿಂದ ತತ್ತರಿಸಿ ಹೋಗಿದ್ದಾರೆ. ಮನಸ್ಸಿನಲ್ಲಿಯೇ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ನೂರಾರು ಸಂಗತಿಗಳು ನಮ್ಮ ಮುಂದಿದ್ದು, ಜನಪರವಾಗಿ ಪಕ್ಷದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಯ ಪಕ್ವವಾಗಿದೆ. ಇದುವರೆಗೆ ಕೊರೋನ ಲಾಕ್ಡೌನ್ ಇತ್ತು. ಕೊರೋನ ವಿಷಯದಲ್ಲಿ ನಾವು ಸಾಮಾಜಿಕವಾಗಿ ನಮ್ಮ ಕರ್ತವ್ಯ ನಿರ್ವಹಿಸುವ ಅವಶ್ಯಕತೆಯೂ ಇತ್ತು. ಆದುದರಿಂದ ಆಡಳಿತ ವರ್ಗದ ಜನವಿರೋಧಿ ನೀತಿ-ನಿರ್ಧಾರಗಳ ವಿರುದ್ಧ ಜನಾಭಿಪ್ರಾಯ ರೂಪಿಸುವ ಕಾರ್ಯಕ್ರಮಗಳಿಗೆ ನಾವು ಮುಂದಾಗುವುದು ಸಾಧ್ಯವಾಗಲಿಲ್ಲ'' ಎಂದು ವೈಎಸ್ವಿ ದತ್ತ ತಿಳಿಸಿದ್ದಾರೆ.
''ಆದುದರಿಂದ ನನ್ನ ವಿನಂತಿ ಇಷ್ಟು, ದಯವಿಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷದ ವರ್ಚಸ್ಸು ಮತ್ತು ಬೆಳವಣಿಗೆ ಹಾಗೂ ಭವಿಷ್ಯದ ಚುನಾವಣೆ ಇವುಗಳನ್ನು ಮೊದಲ ಆದ್ಯತೆ ಎಂದು ಭಾವಿಸಿ ಆ ನಿಟ್ಟಿನಲ್ಲಿ ಚಿಂತಿಸಬೇಕು ಮತ್ತು ಕಾರ್ಯಪ್ರವೃತ್ತರಾಗಬೇಕಿದೆ. ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿ ಕೆರಳಿಸಿ, ನಮ್ಮಿಂದಲೇ ಪಕ್ಷದ ವರ್ಚಸ್ಸು ಕಡಿಮೆಯಾಗುವಂತಹ ನಮ್ಮ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯವಾಗಿದೆ'' ಎಂದು ವೈಎಸ್ವಿ ದತ್ತ ಪತ್ರದಲ್ಲಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.







