ಯಕ್ಷ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ ನಿಧನ

ಉಡುಪಿ, ಜು.10: ಬಡಗುತಿಟ್ಟು ಯಕ್ಷಗಾನದ ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ (95) ಶನಿವಾರ ಕುಂದಾಪುರ ಮತ್ಯಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಸುದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಕಲಾಸೇವೆ ಮಾಡಿದ್ದ ಇವರು ಕೊಡವೂರು, ಪೆರ್ಡೂರು, ಅಮೃತೇಶ್ವರೀ, ಮಂದಾರ್ತಿ, ಮಾರಣಕಟ್ಟೆ ಹಾಗೂ ಕಳುವಾಡಿ ಮೇಳಗಳಲ್ಲಿ ಒಟ್ಟು ಸುಮಾರು 45 ವರ್ಷಕ್ಕೂ ಹೆಚ್ಚು ಕಾಲ ಯಕ್ಷಗಾನ ಭಾಗವತರಾಗಿದ್ದರು. ಇವರಿಗೆ 40ಕ್ಕೂ ಹೆಚ್ಚು ಪೌರಾಣಿಕ ಪ್ರಸಂಗಗಳು ಕಂಠಸ್ಥವಾಗಿದ್ದವು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು. ಯಕ್ಷಗಾನ ಕಲಾರಂಗವು ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಥಮ ಪ್ರಶಸ್ತಿಯನ್ನು ನರಸಿಂಹ ಶೆಟ್ಟರಿಗೆ ನೀಡಿ ಗೌರವಿಸಿತ್ತು. ಮೃತರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





