ಮಂಕಿ ಪಾರ್ಕ್ ನಿರ್ಮಾಣಕ್ಕೆ ತಜ್ಞರ ಅಧ್ಯಯನ ಸಮಿತಿ ರಚನೆ: ಸಚಿವ ಅರವಿಂದ ಲಿಂಬಾವಳಿ
![ಮಂಕಿ ಪಾರ್ಕ್ ನಿರ್ಮಾಣಕ್ಕೆ ತಜ್ಞರ ಅಧ್ಯಯನ ಸಮಿತಿ ರಚನೆ: ಸಚಿವ ಅರವಿಂದ ಲಿಂಬಾವಳಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ತಜ್ಞರ ಅಧ್ಯಯನ ಸಮಿತಿ ರಚನೆ: ಸಚಿವ ಅರವಿಂದ ಲಿಂಬಾವಳಿ](https://www.varthabharati.in/sites/default/files/images/articles/2021/07/10/298332-1625937242.jpg)
ಕಾರ್ಕಳ, ಜು.10: ರೈತರ ಬೆಳೆಗಳ ರಕ್ಷಣೆ ಹಾಗೂ ಮಂಗಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಮಂಕಿ ಪಾರ್ಕ್ ನಿರ್ಮಿಸುವ ಉದ್ದೇಶದಿಂದ ಶೀಘ್ರವೇ ತಜ್ಞರ ಅಧ್ಯಯನ ಸಮಿತಿಯನ್ನು ರಚಿಸಲಾಗುವುದು ಎಂದು ಅರಣ್ಯ ಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಅರಣ್ಯ ಇಲಾಖೆಯ ವತಿಯಿಂದ ಹೆಬ್ರಿಯಲ್ಲಿ ನಿರ್ಮಿಸಲಾದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯನವನವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು. ಜನರು ಅರಣ್ಯ ಮತ್ತು ಪ್ರಾಣಿ ಸ್ನೇಹಿಗಳಾಗಿ ಕೆಲಸ ಮಾಡಿ ಅಭಿವೃದ್ದಿಗೆ ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಣಿ ಮತ್ತು ಮನುಷ್ಯರಿಗೆ ಸಹಾಯವಾಗು ವಂತಹ ನಿಯಮಗಳನ್ನು ಜಾರಿಗೆ ತರಬೇಕಾಗಿದೆ ಎಂದರು.
ಹೆಬ್ರಿ -ಮುನಿಯಾಲು ವಿಶೇಷ ವಿದ್ಯುತ್ ಮಾರ್ಗದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದಕ್ಕೆ ಬೇಕಾದ ನಿರ್ದೇಶನವನ್ನು ಕೇಂದ್ರ ಕಚೇರಿ ಬೆಂಗಳೂರಿನಿಂದ ಹೊರಡಿಸುವ ಕೆಲಸ ನಾನು ಮಾಡುತ್ತೇನೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ವಿಶೇಷ ಮುತುವರ್ಜಿ ವಹಿಸಿ ಮೂರು ನಾಲ್ಕು ತಿಂಗಳಲ್ಲಿ ನಿವಾರಿಸಲಾುವುದು ಎಂದು ಅವರು ತಿಳಿಸಿದರು.
ಕಾನೂನಿನ ನೆಪದಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು. ಅನಗತ್ಯ ಕಾರಣವೊಡ್ಡಿ ಜನರಿಗೆ ತೊಂದರೆ ಮಾಡುವುದರಿಂದ ಇಲಾಖೆಗೆ ಒಳ್ಳೆಯ ಹೆಸರು ಬರುವುದಿಲ್ಲ ಎಂದ ಅವರು, ಮಾನವನ ಆಸೆಗೆ ಮಿತಿ ಎಂಬುದಿಲ್ಲ. ಇದರ ಪರಿಣಾಮ ಅರಣ್ಯಗಳು ನಾಶವಾಗಿವೆ. ಪರಿಸರವನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ ಮುಂದೆ ಸಾಕಷ್ಟು ಸಮಸ್ಯೆಗಳನ್ನು ನಾವು ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ವಹಿಸಿದ್ದರು. ಕುಂದಾಪುರ ಡಿಎಫ್ಒ ಆಶೀಷ್ ರೆಡ್ಡಿ ಮಾತನಾಡಿದರು. ಪಾರ್ಕಿನ ಸಾಕ್ಷಚಿತ್ರ ನಿರ್ಮಿಸಿದ ಛಾಯಗ್ರಾಹಕ ಮೂಡಬಿದಿರೆಯ ರವಿ ಕೋಟ್ಯಾನ್ ಅವರನ್ನು ಸಚಿವರು ಗೌರವಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಹೆಬ್ರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ, ಗ್ರಾಪಂ ಅಧ್ಯಕ್ಷ ಮಾಲತಿ, ನಾಡ್ಪಾಲಿನ ದಿನೇಶ ಹೆಗ್ಡೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಮಿಲ್ಲೋ ಟ್ಯಾಗೋ, ಪ್ರಕಾಶ್ ನೆಟಾಲ್ಕರ್, ರುಥ್ರೇನ್, ಡಾ.ಪ್ರಶಾಂತ್ ಪಿಕೆಎಂ, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿ ದ್ದರು. ಆರ್ಎಫ್ಒ ದಿನೇಶ್ ಕುಮಾರ್ ವಂದಿಸಿದರು. ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.