ಕಾಪು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
![ಕಾಪು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಕಾಪು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ](https://www.varthabharati.in/sites/default/files/images/articles/2021/07/10/298336-1625935142.jpg)
ಕಾಪು : ತೈಲ ಬೆಲೆ ಹಾಗು ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಮಹಿಳಾ ವತಿಯಿಂದ ಕಾಪುವಿನಲ್ಲಿ ಸೈಕಲ್ ಜಾಥ ನಡೆಸಿ, ಪೇಟೆಯಲ್ಲಿ ಕಟ್ಟಿಗೆ ಇರಿಸಿ ಒಲೆ ಉರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ನಡೆದ ಸೈಕಲ್ ಹಾಗೂ ಕಾಲ್ನಡಿಗೆ ಜಾಥಾಕ್ಕೆ ವಿದ್ಯಾನಿಕೇತನ್ ಶಾಲೆಯ ಬಳಿಯಿಂದ ಚಾಲನೆ ನೀಡಲಾಯಿತು. ಸರ್ಕಾರದ ವಿರುದ್ಧ ಭಿತ್ತಿ ಪತ್ರ ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಪು ಪೇಟೆ ತಲುಪಿತು. ಚಟ್ಟ ಕಟ್ಟಿ ಅದರಲ್ಲಿ ಅಡುಗೆ ಅನಿಲವನ್ನು ಜಾಥಾದಲ್ಲಿ ಕೊಂಡೊಯ್ಯುವ ದೃಶ್ಯ ಗಮನಸೆಳೆಯಿತು. ಪೇಟೆಯಲ್ಲಿ ಕಟ್ಟಿಗೆ ಇರಿಸಿ ಒಲೆ ಉರಿಸುವ ಮೂಲಕ ಅಣಕು ಪ್ರದರ್ಶಿಸಲಾಯಿತು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ದರ ಗಗನಕ್ಕೆ ಏರಿಸಿದೆ. ಕೊರೋನ ಭೀತಿ ಪರಿಸ್ಥಿತಿಯಲ್ಲಿ ಸರಕಾರ ಅಧಿಕಾರದ ಕುರ್ಚಿ ಹಂಚುವ ಕಾರ್ಯದಲ್ಲಿ ತೊಡಗಿದೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ನವೀನ್ ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ನವೀನ್ಚಂದ್ರ ಜೆ. ಶೆಟ್ಟಿ, ರಾಜಶೇಖರ್ ಕೋಟ್ಯಾನ್, ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ವೈ. ಸುಕುಮಾರ್, ಶರ್ಫುದ್ದೀನ್ ಶೇಖ್, ವೈ. ಸುಧೀರ್ ಕುಮಾರ್, ಗೀತಾ ವಾಗ್ಲೆ, ಪ್ರಭಾ ಶೆಟ್ಟಿ, ಮುಹಮ್ಮದ್ ಸಾಧಿಕ್, ಕೆ.ಎಚ್. ಉಸ್ಮಾನ್, ಅನಿಲ್ ಕುಮಾರ್, ಯು.ಸಿ. ಶೇಖಬ್ಬ, ಶಾಂತಲತಾ ಶೆಟ್ಟಿ, ಸೌಮ್ಯ ಸಂಜೀವ, ನವೀನ್ ಎನ್. ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ಗಣೇಶ್ ಕೋಟ್ಯಾನ್, ಪ್ರಶಾಂತ್ ಜತ್ತನ್ನ, ಅಮೀರ್ ಮುಹಮ್ಮದ್, ಕರುಣಾಕರ ಪೂಜಾರಿ, ಸುಧೀರ್ ಕರ್ಕೇರ, ಜಿತೇಂದ್ರ ಪುರ್ಟಾಡೋ, ದಿನೇಶ್ ಕೋಟ್ಯಾನ್, ಅಶ್ವಿನಿ, ಕೇಶವ ಹೆಜಮಾಡಿ, ಕೀರ್ತಿ, ರಿಯಾಝ್ ಮುದರಂಗಡಿ, ಜ್ಯೋತಿ ಮೆನನ್, ಲಕ್ಷ್ಮೀಕಾಂತ್, ನಾಗೇಶ್ ಸುವರ್ಣ, ಲಕ್ಷ್ಮೀಶ ತಂತ್ರಿ, ಶ್ರೀಕರ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.