ಉಪ್ಪಿನಂಗಡಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ
![ಉಪ್ಪಿನಂಗಡಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ ಉಪ್ಪಿನಂಗಡಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ](/images/placeholder.jpg)
ಉಪ್ಪಿನಂಗಡಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಹಾಗೂ ಗ್ಯಾಸ್ ಸಬ್ಸಿಡಿ ರದ್ದತಿಯನ್ನು ವಿರೋಧಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪ್ಪಿನಂಗಡಿಯಲ್ಲಿ ಸೈಕಲ್ ಜಾಥಾ ಮತ್ತು ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ ಶನಿವಾರ ನಡೆಯಿತು.
ಮಾಜಿ ಸಚಿವ ಬಿ. ರಮಾನಾಥ ರೈ ಸೈಕಲ್ ಜಾಥಾ ಮತ್ತು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಬಿಜೆಪಿಯವರು ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು, ನಾವುಗಳು ಬುದ್ಧಿವಂತರು, ಜನರೆಲ್ಲಾ ದಡ್ಡರು ಎನ್ನುವ ರೀತಿಯಲ್ಲಿ ವಂಚಿಸಿ, ಮೋಸ ಮಾಡುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರಾದ ನಾವುಗಳು ನಮಗೆ ಎದುರಾಗಿರುವ ಸಮಸ್ಯೆಗಳನ್ನು ತಿಳಿದುಕೊಂಡು ಚಿಂತಿಸಿದರೆ ಬಿಜೆಪಿ ಸರಕಾರದ ವೈಫಲ್ಯ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಜನತೆ ಜಾಗೃತರಾಗಬೇಕು ಎಂದು ಹೇಳಿದರು.
ಬಿಜೆಪಿ ಸರಕಾರ ನೂರಾರು ಭರವಸೆಗಳನ್ನು ನೀಡುತ್ತಾ ಅಧಿಕಾರಕ್ಕೆ ಬಂದಿದ್ದು, ತದ ನಂತರ ತಾನು ತಂದಿಟ್ಟ ಎಲ್ಲಾ ಸಂಕಷ್ಟ ಗಳಿಗೆ ಹಿಂದಿನ ಕಾಂಗ್ರೆಸ್ ಸರಕಾರ ಕಾರಣ ಎಂದು ಸುಳ್ಳು ಹೇಳುತ್ತಲೇ ದಿನದೂಡುತ್ತಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಯ ದ್ವಂಧ ಹೇಳಿಕೆಯನ್ನು ಜನತೆಗೆ ತಿಳಿಸಿ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರವನ್ನು ಕೆಳಗೆ ಇಳಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕು ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಕೆ.ಪಿ.ಸಿ.ಸಿ. ಸದಸ್ಯ ಎಂ.ಎಸ್. ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹಮ್ಮದ್ ಬಡಗನ್ನೂರು ಮಾತನಾಡಿದರು.
ಉಪ್ಪಿನಂಗಡಿ ಗಾಂಧಿಪಾರ್ಕ್ ಬಳಿಯಲ್ಲಿ ಜಮಾಯಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಲ್ಲಿಂದ ಬಸ್ ನಿಲ್ದಾಣದ ತನಕ ಸೈಕಲ್ನಲ್ಲಿ ಮತ್ತು ಪಾದಯಾತ್ರೆ ನಡೆಸಿದರು.
ಪ್ರತಿಭಟನಾ ಪಾದಯಾತ್ರೆಯಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಉಮಾನಾಥ ಶೆಟ್ಟಿ, ಸೋಮನಾಥ, ಕಾರ್ಮಿಕ ಘಟಕದ ನಝೀರ್ ಮಠ, ಜಯಪ್ರಕಾಶ್ ಬದಿನಾರು, ಸಿದ್ದಿಕ್ ಕೆಂಪಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಡಿ.ಕೆ. ಅಬ್ದುಲ್ ರಹಿಮಾನ್, ಜೋಕಿಂ ಡಿಸೋಜಾ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ನ ಅಶ್ರಫ್ ಬಸ್ತಿಕ್ಕಾರ್, ಅಬ್ದುಲ್ಲ ಶಾಫಿ ಪೆರ್ನೆ, ಸುನಿಲ್ ನೆಲ್ಸನ್, ವೆಂಕಪ್ಪ ಪೂಜಾರಿ, ಪದ್ಮನಾಭ ಪೂಜಾರಿ ಅಳಿಕೆ, ರಾಜೇಂದ್ರ ರೈ ಪೆರುವಾಯಿ, ರಾಧಾಕೃಷ್ಣ ರೈ ಪೆರುವಾಯಿ, ಜಯರಾಮ ಮಾಣಿಲ, ವಿಷ್ಣು ಭಟ್ ಮಾಣಿಲ, ಶ್ರೀಧರ ಬಾಳೆಕಲ್ಲು, ರಮಾನಾಥ ವಿಟ್ಲ, ಹಸೈನಾರ್ ನೆಲ್ಲಿಗುಡ್ಡೆ, ಅಶೋಕ್ ಎನ್.ಎಸ್.ಡಿ, ನಾಸಿರ್ ಕೋಲ್ಪೆ, ಮೋಹನ್ ಬುಜಿನಡ್ಕ, ಮಹಮ್ಮದ್ ಕೆಂಪಿ, ಯುವಕ ಕಾಂಗ್ರೆಸ್ ಅಧ್ಯಕ್ಷ ಅಕ್ಬರುಲ್ ಸಿದ್ದಿಕ್, ಮಾಜಿ ಅಧ್ಯಕ್ಷ ಯು.ಟಿ. ತೌಸಿಫ್, ಶಬ್ಬೀರ್ ಕೆಂಪಿ, ನವಾಲ್ ಕೊಳ್ಳೇಜಾಲ್, ಮಹಿಳಾ ಕಾಂಗ್ರೆಸ್ನ ಗೀತಾ ದಾಸರಮೂಲೆ, ಸವಿತಾ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ-ಉಪ್ಪಿನಂಗಡಿ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ. ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಯುನಿಕ್ ವಂದಿಸಿದರು.