ಮೈಸೂರು: ಆಸ್ಪತ್ರೆಯ ವಾರ್ಡ್ನಲ್ಲಿ ಬುದ್ಧಿಮಾಂದ್ಯ ಮಹಿಳೆಯ ಅತ್ಯಾಚಾರ ಯತ್ನ
ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ವೈದ್ಯರು: ಆರೋಪ

ಮೈಸೂರು, ಜು.10: ಮೈಸೂರಿನ ಕೆ.ಆರ್.ಆಸ್ಪತ್ರೆಯ ವಾರ್ಡ್ನಲ್ಲಿ ಬುದ್ಧಿಮಾಂದ್ಯ ಮಹಿಳೆಯ ಅತ್ಯಾಚಾರಕ್ಕೆ ಯತ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಾರ್ಡ್ ಕಿಟಕಿ ಗ್ರಿಲ್ ಮುರಿದು ಒಳ ನುಗ್ಗಿ ಬಂದ್ದ ಅಪರಿಚಿತ ವ್ಯಕ್ತಿ ಸುಮಾರು 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಅತ್ಯಾಚಾರ ಯತ್ನದ ಬಗ್ಗೆ ಮಹಿಳೆ ಮಾಹಿತಿ ನೀಡಿದರೂ ವೈದ್ಯರು ಕ್ರಮ ಕೈಗೊಂಡಿಲ್ಲಂದು ಆರೋಪಿಸಲಾಗಿದೆ.
ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಅದೇ ವಾರ್ಡ್ನಲ್ಲಿದ್ದ ವೃದ್ಧೆಯೋರ್ವರಿಂದ ಸತ್ಯ ಬಯಲಾಗಿದೆ. ಅತ್ಯಾಚಾರದ ಬಗ್ಗೆ ವಾರದ ಹಿಂದೆಯೇ ವೈದ್ಯರಿಗೆ ವೃದ್ಧೆ ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ವೃದ್ಧೆಗೆ ಹಲ್ಲೆ ಮಾಡಿ ಘಟನೆ ಬಗ್ಗೆ ಬಾಯಿ ಬಿಡದಂತೆ ಆಸ್ಪತ್ರೆ ಸಿಬ್ಬಂದಿ ಕೂಡಿ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಮೊದಲು ಕಳ್ಳತನಕ್ಕೆ ಯತ್ನ ನಡೆದಿದೆ ಎಂದು ಹೇಳಲಾಗಿತ್ತು. ಹಾಗಾಗಿ ಸುಮ್ಮನಿದ್ದೆವು. ಆದರೆ, ನಂತರ ಅತ್ಯಾಚಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕಾರಣದಿಂದ ಪೊಲೀಸರಿಗೆ ದೂರು ನೀಡಿದ್ದೇವೆ. ಅವರು ಬುದ್ಧಿಮಾಂದ್ಯ ಮಹಿಳೆ. ಸದ್ಯ ಪ್ರಾಥಮಿಕ ಪರೀಕ್ಷೆ ನಡೆಸಲಾಗಿದೆ. ಅತ್ಯಾಚಾರ ನಡೆದ ಬಗ್ಗೆ ಮಾಹಿತಿ ಕಂಡು ಬಂದಿಲ್ಲ. ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಸಿಸಿಟಿವಿ ಫೊಟೇಜ್ ಅನ್ನು ಪರಿಶೀಲನೆ ಮಾಡಲಾಗುತ್ತಿದೆ.
-ಡಾ.ನಂಜುಂಡಸ್ವಾಮಿ, ಕೆ.ಆರ್.ಆಸ್ಪತ್ರೆ ಅಧೀಕ್ಷಕ
ಆಸ್ಪತ್ರೆಯಲ್ಲಿ ಹೆಚ್ಚು ಸಿ.ಸಿ.ಕ್ಯಾಮರಾಗಳು ಹಾಗೂ ಭದ್ರತಾ ಸಿಬ್ಬಂದಿಯ ಅವಶ್ಯಕತೆ ಇದೆ. ಮೂರು ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸಲು, ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲು ಕೂಡಲೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ಆ ಯುವತಿಗೆ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನ ರೋಗಿಗಳಿಗೆ ಹಳೆಯ ಜಯದೇವ ಆಸ್ಪತ್ರೆಯ ಕಟ್ಟಡದಲ್ಲಿ ಚಿಕಿತ್ಸೆ ನೀಡುತ್ತಿದ್ದ ಕಾರಣ ಅಲ್ಲಿದ್ದ ರೋಗಿಗಳನ್ನೆಲ್ಲಾ ಸ್ಥಳಾಂತರ ಮಾಡಲಾಗಿತ್ತು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುತ್ತದೆ.
-ಎಲ್.ನಾಗೇಂದ್ರ, ಶಾಸಕ







