ಜನಸಂಖ್ಯೆ ಸ್ಫೋಟವನ್ನು ತಡೆಗಟ್ಟಲು ದೃಢ ಸಂಕಲ್ಪ ಮಾಡಿ: ಸಚಿವ ಬೊಮ್ಮಾಯಿ
![ಜನಸಂಖ್ಯೆ ಸ್ಫೋಟವನ್ನು ತಡೆಗಟ್ಟಲು ದೃಢ ಸಂಕಲ್ಪ ಮಾಡಿ: ಸಚಿವ ಬೊಮ್ಮಾಯಿ ಜನಸಂಖ್ಯೆ ಸ್ಫೋಟವನ್ನು ತಡೆಗಟ್ಟಲು ದೃಢ ಸಂಕಲ್ಪ ಮಾಡಿ: ಸಚಿವ ಬೊಮ್ಮಾಯಿ](https://www.varthabharati.in/sites/default/files/images/articles/2021/07/11/298423-1626014395.jpg)
ಉಡುಪಿ, ಜು.11: ಜನಸಂಖ್ಯಾ ಸ್ಫೋಟ ಸದ್ದಿಲ್ಲದೆ ನಮ್ಮ ದೇಶದ ಶ್ರೇಯೋಭಿವೃದ್ಧಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಹಲವು ನಿಯಂತ್ರಣ ಕ್ರಮಗಳನ್ನು ಉಚಿತವಾಗಿ ವಿತರಿಸುವ ಸರ್ವ ಸಿದ್ಧತೆಯನ್ನು ಕೈಗೊಳ್ಳುತ್ತಿದೆ. ಜನಜಾಗೃತಿ ಎಷ್ಟೇ ಪರಿಣಾಮ ಕಾರಿಯಾಗಿದ್ದರೂ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಜೋಡಿಸಬೇಕಾಗಿರುವುದು ಇಂದಿನ ಅಗತ್ಯ ವಾಗಿದೆ ಎಂದು ರಾಜ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಅವರು ಜಿಲ್ಲೆಯ ಜನತೆಗೆ ಈ ದಿನದ ಸಂದೇಶವನ್ನು ನೀಡಿದ್ದಾರೆ.
ಜನಸ್ಫೋಟದಿಂದ ದೇಶದ ಮೇಲಾಗುವ ದುಷ್ಪರಿಣಾಮಗಳನ್ನು ಮತ್ತು ದೇಶದ ಅಭಿವೃದ್ಧಿಗೆ ಆಗುತ್ತಿರುವ ತೊಂದರೆಗಳನ್ನು ಉಡುಪಿ ಜಿಲ್ಲೆಯ ಅರ್ಹ ದಂಪತಿಗಳು, ಯುವಕ-ಯುವತಿಯರು ಹಾಗೂ ಸಾರ್ವಜನಿಕರು ಅರ್ಥೈಸಿ ಕೊಳ್ಳಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ಜನಸಂಖ್ಯೆ ಸ್ಫೋಟವನ್ನು ತಡೆಗಟ್ಟಲು ಹಮ್ಮಿಕೊಂಡಿರುವ ತಾತ್ಕಾಲಿಕ ಅಥವಾ ಶಾಶ್ವತ ವಿಧಾನಗಳನ್ನು ಅನುಸರಿಸಿ ಚಿಕ್ಕ ಕುಟುಂಬ ವನ್ನು ಆಳವಡಿಸಿಕೊಳ್ಳುವ ದೃಢ ಸಂಕಲ್ಪವನ್ನು ಜನಸಂಖ್ಯಾ ದಿನಾಚರಣೆಯ ಈ ದಿನದಂದು ಮಾಡಬೇಕು. ಜನಸಂಖ್ಯಾ ಈಗಿನ ದರವನ್ನು ಹಿಡಿತದಲ್ಲಿಟ್ಟು ಅಭಿವೃದ್ಧಿ ಪಥದತ್ತ ದೇಶ ಸಾಗಲು ಎಲ್ಲರೂ ಸಹಕರಿಸಬೇಕು ಮತ್ತು ಸುಖಿ ಕುಟುಂಬದ ಸೂತ್ರ ವಿಪತ್ತಿನಲ್ಲೂ ಕುಟುಂಬ ಯೋಜನೆ ಸೇವೆ, ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ಎಂಬ ಘೋಷಣೆ ಎಲ್ಲ ಕಡೆ ಮೊಳಗುವಂತಾಗಲಿ ಎಂದು ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದರು.