ಕೆಆರ್ ಎಸ್ ಸುತ್ತ ಗಣಿಗಾರಿಕೆ ನಿಷೇಧಿಸಿ: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ

ಮೈಸೂರು,ಜು.11: ರಾಜ್ಯ ಸರ್ಕಾರ ತಜ್ಞರ ವರದಿ ಆಧರಿಸಿ ಕೆಆರ್ ಎಸ್ ಜಲಾಶಯದ ಸುತ್ತ ನಡೆಯುತ್ತಿರುವ ಎಲ್ಲ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳೇ ಮೈಸೂರು ಭಾಗಕ್ಕೆ ಈ ಆಣೆಕಟ್ಟೆ ಜೀವನಾಡಿ. ಆದರೆ, ನಿರಂತರವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಡ್ಯಾಮ್ಗೆ ಅಪಾಯ ಎದುರಾಗಿದೆ. ಡ್ಯಾಮ್ನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದರು.
ಸುಮಲತಾ ಅವರು ಡ್ಯಾಮ್ ಬಿರುಕು ಬಿಟ್ಟಿದೆ ಎಂದರೆ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಏಕೆ ರೇಗಾಡಬೇಕು? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರ ಹೇಳಿಕೆ ಹಿಂದಿರುವ ಹಿತಾಸಕ್ತಿ ಏನೆಂಬುದನ್ನು ಜನತೆಗೆ ತಿಳಿಸಬೇಕು. ಮಂಡ್ಯದ ಶಾಸಕರು ಮತ್ತು ಮಾಜಿ ಶಾಸಕರು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಕಾಪಾಡುವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ನಿಲುವನ್ನು ಖಂಡಿಸಿದರು.
ಗಣಿ ಸಚಿವ ಮುರುಗೇಶ್ ನಿರಾಣಿ ಮತ್ತು ಮಂಡ್ಯದ ಜೆಡಿಎಸ್ ಶಾಸಕರ ನಡುವೆ ಒಳ ಒಪ್ಪಂದವಾಗಿದೆ. ಮೈಶುಗರ್ ಕಾರ್ಖಾನೆ ತಂಟೆಗೆ ಶಾಸಕರು ಹೋಗದಂತೆ ಹಾಗೂ ಗಣಿಗಾರಿಕೆ ತಂಟೆಗೆ ಸಚಿವ ನಿರಾಣಿ ಬಾರದಂತೆ ಒಳ ಒಪ್ಪಂದವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬ ಗುಮಾನಿ ಈಗಾಗಲೇ ಮಂಡ್ಯದ ಜನರಲ್ಲಿ ಶುರುವಾಗಿದೆ ಎಂದರು.
ಕೆಆರ್ ಎಸ್ ಡ್ಯಾಮ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದರೆ, ಪ್ರಾಣ ಬೆದರಿಕೆ ಬರಲಿದೆ. ಈ ಬಗ್ಗೆ ಧ್ವನಿ ಎತ್ತಿದ ಬಹುಪಾಲು ಮಂದಿ ಅದೃಶ್ಯರಾಗಿದ್ದಾರೆ. ಗಣಿಗಾರಿಕೆಯಿಂದ ಮುಂದೆ ಕೆಆರ್ ಎಸ್ ಡ್ಯಾಮ್ಗೆ ಅಪಾಯ ಇರುವುದಂತೂ ನಿಜ. ಒಂದು ವೇಳೆ ಡ್ಯಾಮ್ ಒಡೆದರೆ ಮುಂದಾಗುವ ಅನಾಹುತವನ್ನು ಊಹಿಸಿಕೊಳ್ಳಲು ಅಸಾಧ್ಯ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾಸ್ವಾಮಿ ಹಾಗೂ ಜೆಡಿಎಸ್ ಶಾಸಕರು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಅಶ್ವತ್ಥನಾರಾಯಣ ರಾಜೇ ಅರಸ್, ಪ್ರಸನ್ನ, ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜನಪ್ರತಿನಿಧಿಯಾಗಿ ಸಂಸದೆ ಸುಮಲತಾ ಎತ್ತಿರುವ ಧ್ವನಿ ಸರಿಯಾಗಿದ್ದು, ಅವರ ನಿಲುವನ್ನು ನಾವು ಬೆಂಬಲಿಸುವುದಲ್ಲದೇ, ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ರೈತ ಸಂಘವೂ ಬೆಂಬಲ ನೀಡಲಿದೆ. ಆಣೆಕಟ್ಟೆ ರಕ್ಷಿಸಿ, ಗಣಿಗಾರಿಕೆ ನಿಲ್ಲಿಸಿ ಎಂಬ ಹೋರಾಟವನ್ನು ಯಾರೇ ಮಾಡಿದರೂ, ಅದಕ್ಕೆ ನಮ್ಮ ಬೆಂಬಲವಿದೆ.
ಬಡಗಲಪುರ ನಾಗೇಂದ್ರ,
-ರಾಜ್ಯ ರೈತ ಸಂಘದ ಅಧ್ಯಕ್ಷ.







