ಬೈಕಂಪಾಡಿ : ಲಾರಿ ಢಿಕ್ಕಿ; ಯುವಕ ಮೃತ್ಯು
![ಬೈಕಂಪಾಡಿ : ಲಾರಿ ಢಿಕ್ಕಿ; ಯುವಕ ಮೃತ್ಯು ಬೈಕಂಪಾಡಿ : ಲಾರಿ ಢಿಕ್ಕಿ; ಯುವಕ ಮೃತ್ಯು](https://www.varthabharati.in/sites/default/files/images/articles/2021/07/11/298459-1626023183.jpg)
ಮಂಗಳೂರು, ಜು.11: ನಗರದ ಹೊರವಲಯದ ಬೈಕಂಪಾಡಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಉಪಚರಿಸಲು ಮುಂದಾಗಿದ್ದ ಸ್ಕೂಟಿ ಸವಾರನು ಲಾರಿ ಅಡಿಗೆ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ.
ಸುಳ್ಯ ಮೂಲದ ತೇಜಸ್ (28) ಮೃತ ಯುವಕ ಎಂದು ಗುರುತಿಸಲಾಗಿದೆ.
ಮೃತ ತೇಜಸ್ ಮಂಗಳೂರಿನಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದರು. ಸಂಜೆ ವೇಳೆ ತನ್ನ ಕರ್ತವ್ಯ ಮುಗಿಸಿಕೊಂಡು ಮನೆ ಕಡೆ ತೆರಳುತ್ತಿದ್ದರು. ಈ ವೇಳೆ ಬೈಕಂಪಾಡಿ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾಗಿದೆ. ಇದನ್ನು ಗಮನಿಸಿದ ತೇಜಸ್ ತನ್ನ ಸ್ಕೂಟಿಯಿಂದ ಇಳಿದು ಗಾಯಾಳು ಬೈಕ್ ಸವಾರನನ್ನು ಉಪಚರಿಸಲು ಮುಂದಾದರು.
ರಸ್ತೆಯಲ್ಲಿ ಅಡ್ಡಬಿದ್ದಿದ್ದ ದ್ವಿಚಕ್ರ ವಾಹನವನ್ನು ಎತ್ತಿ ನಿಲ್ಲಿಸಿದ್ದಾರೆ. ನಂತರ ಅದೇ ಬೈಕ್ನಲ್ಲಿ ಕೂತು ದೂಡಿಕೊಂಡು ರಸ್ತೆಯ ಬದಿಗೆ ತರುವ ಪ್ರಯತ್ನದಲ್ಲಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಆಗಮಿಸಿದ ಲಾರಿಯೊಂದು ತೇಜಸ್ ದೂಡಿಕೊಂಡು ಹೋಗುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದ್ದು, ಅನತಿ ದೂರದವರೆಗೆ ಎಳೆದೊಯ್ದಿದೆ. ಇದರಿಂದ ತೇಜಸ್ ಅವರ ಸೊಂಟದ ಕೆಳಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಈ ವೇಳೆ ಸ್ಥಳೀಯರು ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ ಗಾಯಾಳು ವಿಪರೀತ ರಕ್ತಸ್ತಾವದಿಂದ ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಅಸುನೀಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ತೇಜಸ್ ಅವರ ಮೃತದೇಹ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿದೆ ಎಂದು ತಿಳಿದುಬಂದಿದೆ. ಈ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.