ಶಾಲೆ ತೆಗೆದು ಸ್ಮಾರಕ ಕಟ್ಟಬೇಕು ಎನ್ನುವವರ ಮನಸ್ಸಿನಲ್ಲಿ ವಿವೇಕಾನಂದರಿರುವುದಿಲ್ಲ: ಶಾಸಕ ಎನ್.ಮಹೇಶ್

ಮೈಸೂರು,ಜು.11: ಶಾಲೆ ತೆಗೆದು ಸ್ಮಾರಕ ಕಟ್ಟಬೇಕು ಎನ್ನುವವರ ಮನಸ್ಸಿನಲ್ಲಿ ವಿವೇಕಾನಂದರಿರುವುದಿಲ್ಲ. ಅಂತಹವರೆ ಇಲ್ಲಿ ಹೆಚ್ಚಾಗಿದ್ದಾರೆ. ಈ ವಿವಾದಕ್ಕೆ ಹೆಚ್ಚು ಅವಕಾಶ ನೀಡದೇ ಶಾಲೆಯೂ ಇರಲಿ ಸ್ಮಾರಕವೂ ಇರಲಿ ಎನ್ನುವಂತೆ ಸರ್ಕಾರ ಒಂದು ಒಳ್ಳೆಯ ತೀರ್ಮಾನ ಕೈಗೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು.
ಎನ್ಟಿಎಂ ಶಾಲೆ ಉಳಿಸಿ ಎಂದು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ರವಿವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದ ಅವರು, ಶಾಲೆಯನ್ನು ತೆರವುಗೊಳಿಸಿ ಸ್ಮಾರಕ ಕಟ್ಟಬೇಕು ಎನ್ನುವವರ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದರಿಲ್ಲ. ನಾನು ವಿವೇಕಾನಂದರ ಅಭಿಮಾನಿ. ದೊಡ್ಡ ವ್ಯಕ್ತಿತ್ವದ ಹೆಸರಿನಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
ನಾಯಿ ಕೊಡೆಗಳಂತೆ ಹಬ್ಬುತ್ತಿರುವ ಖಾಸಗಿ ಶಾಲೆಗಳ ಸಂದರ್ಭದಲ್ಲಿ ಈ ಶಾಲೆ ಸೊರಗಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆಯನ್ನು ಅತಿಕ್ರಮಿಸುವುದಕ್ಕೆ ನನ್ನ ವಿರೋಧವಿದೆ. ಶತಮಾನ ಕಂಡಿರುವ ಶಾಲೆಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಕರ್ನಾಟಕ ಸರ್ಕಾರದ ಆದೇಶವಿದೆ. ಶತಮಾನ ದಾಟಿರುವ ಈ ಶಾಲೆಯನ್ನು ಪುನರುಜ್ಜೀವನಗೊಳಿಸಿ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.





