ಮಂಗಳೂರು ಸೈಕಲ್ ಪಥ ಅವೈಜ್ಞಾನಿಕ : ಕಾಂಗ್ರೆಸ್ ಆರೋಪ
![ಮಂಗಳೂರು ಸೈಕಲ್ ಪಥ ಅವೈಜ್ಞಾನಿಕ : ಕಾಂಗ್ರೆಸ್ ಆರೋಪ ಮಂಗಳೂರು ಸೈಕಲ್ ಪಥ ಅವೈಜ್ಞಾನಿಕ : ಕಾಂಗ್ರೆಸ್ ಆರೋಪ](https://www.varthabharati.in/sites/default/files/images/articles/2021/07/12/298503-1626074330.jpg)
ಮಂಗಳೂರು, ಜು.12: ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ಎರಡು ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೈಕಲ್ ಪಥವು ಅವೈಜ್ಞಾನಿಕವಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ವಿಪಕ್ಷ ನಾಯಕ ಎ.ಸಿ. ವಿನಯರಾಜ್ ಎಚ್ಚರಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಮಾದರಿಯಲ್ಲಿ ಸೈಕಲ್ ಪಥ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮಂಗಳೂರಿನಲ್ಲಿ ಪ್ರಸ್ತಾವಿತ ಸೈಕಲ್ ಪಥವು ಅವೈಜ್ಞಾನಿಕವಾಗಿದೆ. ಪ್ರಸ್ತಾವಿತ ಮಾರ್ಗಗಳಲ್ಲಿ 3 ಮೀ. ಅಗಲದ ಸುಮಾರು12 ಕಿ.ಮೀ. ಉದ್ದರ ಸೈಕಲ್ ಪಥ ನಿರ್ಮಿಸಲು ಸ್ಥಳಾವಕಾಶವೇ ಇಲ್ಲ. ಆದಾಗ್ಯೂ ಸೈಕಲ್ ಪಥ ಮಾಡಲು ಮನಪಾ ಹೊರಟಿದೆ. ಇದಕ್ಕೆ ಶಾಸಕ ವೇದವ್ಯಾಸ ಕಾಮತ್ರ ಹಠಮಾರಿ ಧೋರಣೆಯೇ ಕಾರಣ ಎಂದು ಆಪಾದಿಸಿದ್ದಾರೆ.
ಶಾಸಕರಿಗೆ ನಗರ ಅಭಿವೃದ್ಧಿಯಾಗುವುದು ಬೇಕಾಗಿಲ್ಲ. ತನ್ನ ಹಿಂಬಾಲಕರಿಗೆ ಗುತ್ತಿಗೆ ವಹಿಸಿಕೊಡುವ ಉದ್ದೇಶ ಮಾತ್ರ ಅವರಿಗೆ ಇದೆ. ಆ ಮೂಲಕ ಅವರು ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆಯೇ ಎಂಬ ಸಂಶಯ ನಮಗೆ ಕಾಡುತ್ತಿದೆ. ಮನಪಾ ಆಡಳಿತ ಮತ್ತು ಸ್ಮಾರ್ಟ್ ಯೋಜನೆಯಡಿ ಕಾಮಗಾರಿ ನಡೆಸುವಾಗ ವಿಪಕ್ಷದ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಕನಿಷ್ಟ ಸೌಜನ್ಯವೂ ಶಾಸಕರು, ಮೇಯರ್ ಸಹಿತ ಆಡಳಿತಾರೂಢ ಬಿಜೆಪಿ ಸದಸ್ಯರಿಗೆ ಇಲ್ಲ ಎಂದು ವಿನಯರಾಜ್ ಹೇಳಿದರು.
ಸೈಕಲ್ ಪಥವು ವೈಜ್ಞಾನಿಕ ನೆಲೆಯಲ್ಲಿ ನಿರ್ಮಿಸಬೇಕಿತ್ತು. ಆದರೆ, ಶಾಸಕರು ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ತರಾತುರಿ ಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇದು ಖಂಡನೀಯ. ಇದರ ವಿರುದ್ಧ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಆದಾಗ್ಯೂ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ವಿನಯರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ಗಳಾದ ಮಹಾಬಲ ಮಾರ್ಲ, ಜೆಸಿಂತಾ ವಿಜಯಾ ಆಲ್ಫ್ರೆಡ್, ಕಾರ್ಪೊರೇಟರ್ ಅನಿಲ್ ಕುಮಾರ್ ಪೂಜಾರಿ, ಸ್ಟಾನಿ ಆಲ್ವಾರೀಸ್, ಹೊನ್ನಯ್ಯ, ಶಂಸುದ್ದೀನ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
![](https://www.varthabharati.in/sites/default/files/images/galllery/2021/07/12/PSX_20210712_121846.jpg)