ಗಿಳಿಯಾರು: ನೆರೆಯಿಂದ ಬೆಳೆ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ
![ಗಿಳಿಯಾರು: ನೆರೆಯಿಂದ ಬೆಳೆ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ ಗಿಳಿಯಾರು: ನೆರೆಯಿಂದ ಬೆಳೆ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ](https://www.varthabharati.in/sites/default/files/images/articles/2021/07/13/298690-1626182686.jpg)
ಕೋಟ,: ಕೋಟ ಹೋಬಳಿಯ ಗಿಳಿಯಾರು ಗ್ರಾಮದ ಹರ್ತಟ್ಟು ಎಂಬಲ್ಲಿ ಮಳೆಯಿಂದಾಗಿ ನೆರೆ ಬಂದು ಎಕರೆ ಗಟ್ಟಲೆ ಕೃಷಿ ಬೆಳೆ ನಾಶವಾಗಿರುವುದಾಗಿ ಸ್ಥಳೀಯ ರೈತರು ಅಳಲು ತೋಡಿಕೊಂಡಿದ್ದಾರೆ.
‘ಇಲ್ಲಿನ ನೂರಾರು ಎಕ್ರೆ ಭೂಮಿಯಲ್ಲಿ ನೆರೆ ಬಂದು ನೀರು ತುಂಬಿಕೊಂಡಿದೆ. ಮಳೆ ನಿಂತರು ನೆರೆ ಇಳಿದು ಹೋಗುತ್ತಿಲ್ಲ. ಇದಕ್ಕೆ ಸಮೀಪದ ಹೊಳೆಯ ಹೂಳೆತ್ತದೆ ಇರುವುದೇ ಕಾರಣ. ಇದರಿಂದ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ’ ಎಂದು ಸ್ಥಳೀಯ ಕೃಷಿಕರಾದ ಗಿರೀಶ್ ದೇವಾಡಿಗ ದೂರಿದರು.
ಹೊಳೆಯ ಹೂಳೆತ್ತುವ ಬಗ್ಗೆ 10 ವರ್ಷಗಳಿಂದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ವರ್ಷದಲ್ಲಿ ನೆರೆ ಬಂದು ಬೆಳೆ ನಾಶ ಆಗಿದ್ದಕ್ಕೆ ಸರಕಾರದಿಂದ ಒಂದಿಬ್ಬರಿಗೆ ಪರಿಹಾರ ನೀಡಲಾಗುತ್ತಿದೆ. ಆದರೆ ನಮಗೆ ಬೇಕಾಗಿರುವುದು ನೆರೆ ಪರಿಹಾರ ಅಲ್ಲ. ಅದರ ಬದಲು ಶಾಶ್ವತ ಪರಿಹಾರ ಬೇಕಾಗಿದೆಂದು ಅವರು ಆಗ್ರಹಿಸಿದರು.
ಮರ ಬಿದ್ದು ಮನೆಗೆ ಹಾನಿ: ಶಾಸಕರ ಭೇಟಿ
ಉಡುಪಿ ವಿಧಾನಸಭಾ ಕ್ಷೇತ್ರದ ಕಳ್ತೂರು ಗ್ರಾಪಂ ವ್ಯಾಪ್ತಿಯ ಸಂತೆಕಟ್ಟೆ ನಿವಾಸಿ ಪೂರ್ಣಿಮಾ ಆಚಾರ್ಯರ ಮನೆಯ ಮೇಲೆ ಮರ ಬಿದ್ದು ಹಾನಿ ಯಾಗಿದ್ದು, ಇಂದು ಶಾಸಕ ಕೆ.ರಘುಪತಿ ಭಟ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಪಂ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಹಾಗೂ ತಹಶೀಲ್ದಾರ್ ರಾಜಶೇಖರ, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್, ಕಳ್ತೂರು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.