ಕೋವಿಡ್ ಕಾರಣದಿಂದ ಈ ವರ್ಷದ ಕನ್ವರ್ ಯಾತ್ರೆ ರದ್ದುಪಡಿಸಿದ ಉತ್ತರಾಖಂಡ:ಎಎನ್ಐ ವರದಿ

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಉತ್ತರಾಖಂಡ ರಾಜ್ಯವು ಈ ವರ್ಷದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮಂಗಳವಾರ ವರದಿ ಮಾಡಿದೆ.
ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಪ್ರಚೋದಿಸುವಲ್ಲಿ ಇಂತಹ ಯಾತ್ರೆಗಳು ಕಾರಣವಾಗಬಹುದು ಎಂಬ ಕಳವಳ ವ್ಯಕ್ತವಾಗಿರುವ ಮಧ್ಯೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಕೊರೋನದ ಮೊದಲ ಅಲೆಯ ಹಾವಳಿಯ ಮಧ್ಯೆ ಕಳೆದ ವರ್ಷವೂ ಕನ್ವರ್ ಯಾತ್ರೆ ರದ್ದುಗೊಂಡಿತ್ತು.
ಈ ವರ್ಷ ಕನ್ವರ್ ಯಾತ್ರೆ ನಡೆಯುತ್ತದೆಯೇ ಅಥವಾ ಇಲ್ಲವೇ ಎಂದು ರವಿವಾರ ಸುದ್ದಿಗಾರರು ಕೇಳಿದಾಗ, "ದೇವರುಗಳು ಕೂಡ ಜನರು ಸಾಯುವುದನ್ನು ಬಯಸುವುದಿಲ್ಲ. ಜೀವಗಳನ್ನು ಉಳಿಸುವುದು ಈ ಸಮಯದ ಆದ್ಯತೆಯಾಗಿದೆ"ಎಂದು ಧಾಮಿ ಹೇಳಿದ್ದರು.
ವಾರ್ಷಿಕ ಕಾರ್ಯಕ್ರಮದಲ್ಲಿ ಕನಿಷ್ಠ ಸಂಖ್ಯೆಯ ಜನರು ಮಾತ್ರ ಭಾಗವಹಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಇಂದು ಬೆಳಗ್ಗೆ ಒತ್ತಾಯಿಸಿದರು. ಕೋವಿಡ್-19 ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶನ ನೀಡಿದ್ದರು.





