ದಲಿತರ ಗೂಡಂಗಡಿ ತೆರವುಗೊಳಿಸುವ ಮೂಲಕ ಜಿಲ್ಲಾಡಳಿದಿಂದ ಕಾನೂನು ಉಲ್ಲಂಘನೆ: ದಸಂಸ ಆರೋಪ
![ದಲಿತರ ಗೂಡಂಗಡಿ ತೆರವುಗೊಳಿಸುವ ಮೂಲಕ ಜಿಲ್ಲಾಡಳಿದಿಂದ ಕಾನೂನು ಉಲ್ಲಂಘನೆ: ದಸಂಸ ಆರೋಪ ದಲಿತರ ಗೂಡಂಗಡಿ ತೆರವುಗೊಳಿಸುವ ಮೂಲಕ ಜಿಲ್ಲಾಡಳಿದಿಂದ ಕಾನೂನು ಉಲ್ಲಂಘನೆ: ದಸಂಸ ಆರೋಪ](https://www.varthabharati.in/sites/default/files/images/articles/2021/07/14/298850-1626275698.jpg)
ಉಡುಪಿ, ಜು.14: ಬ್ರಹ್ಮಗಿರಿಯಲ್ಲಿನ ದಲಿತ ಮಹಿಳೆ ರಾಧಾ ಅಶೋಕ್ ಅರಾಜ್ ಎಂಬವರ ಮೀನು ಮಾರಾಟದ ಗೂಡಂಗಡಿಯನ್ನು ಉಡುಪಿ ನಗರ ಸಭೆಯು ತೆರವುಗೊಳಿಸುವ ಮೂಲಕ ಜಿಲ್ಲಾಡಳಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ) ರಾಜ್ಯ ಸಂಚಾಲಕ ಉದಯ್ಕುಮಾರ್ ತಲ್ಲೂರು ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿ ಕಾರಿ ಹಾಗೂ ಪೌರಾಯುಕ್ತರು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಜಿಲ್ಲಾಡಳಿತ ನೊಂದವರ ಪರ ನಿಲ್ಲದೆ ಕಾನೂನು ಉಲ್ಲಂಘನೆ ಮಾಡಿ ದಲಿತ ವಿರೋಧಿಯಾಗಿ ವರ್ತಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ ಹೈಕೋರ್ಟ್ನಲ್ಲಿ ದೂರು ಸಲ್ಲಿಸಲಾಗುವುದು. ಆದುದರಿಂದ ತಕ್ಷಣವೇ ರಾಧಾ ಅವರಿಗೆ ಮೀನು ವ್ಯಾಪಾರ ಮಾಡುವ ಗೂಡಂಗಡಿಯನ್ನು ಪುನರ್ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಸಂತ್ರಸ್ತ ಅಶೋಕ್ ರಾಜ್ ಮಾತನಾಡಿ, ಹಲವು ವರ್ಷಗಳಿಂದ ಹುಲಿವೇಷ ಹಾಕುತ್ತಿದ್ದೆ. ಕಳೆದ ಎರಡು ವರ್ಷಗಳಿಂದ ಲಾಕ್ಡೌನ್ನಿಂದ ಕೆಲಸ ಇಲ್ಲದೆ ಪತ್ನಿಯ ಹೆಸರಿನ ಪರವಾನಿಗೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದೇವೆ. ಇದರಲ್ಲಿ ಯಾವುದೇ ಲಾಭ ಇಲ್ಲದಿದ್ದರೂ ಜೀವನ ಸಾಗುತ್ತಿತ್ತು. ಇದೀಗ ಅಧಿಕಾರಿಗಳು ಯಾವುದೇ ನೋಟೀಸ್ ಜಾರಿ ಮಾಡದೆ ಏಕಾಏಕಿಯಾಗಿ ಅಂಗಡಿಯನ್ನು ತೆರವುಗೊಳಿಸಿ ಅನ್ಯಾಯ ಎಸಗಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ರಾಧಾ ಅಶೋಕ್ರಾಜ್, ಶಿವಸೇನೆ ಮುಖಂಡ ಮಧುಕರ ಮುದ್ರಾಡಿ, ಪ್ರಮೋದ್ ಉಚ್ಚಿಲ, ಸಂಜೀವ ಬಳ್ಕೂರು ಉಪಸ್ಥಿತರಿದ್ದರು.