ಚಾಲಕನ ಸಾಮರ್ಥ್ಯ ಪರೀಕ್ಷೆ ವೇಳೆ ನಿಯಮ ಉಲ್ಲಂಘನೆ: ಸರಕಾರಕ್ಕೆ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು, ಜು.14: ಡ್ರೈವಿಂಗ್ ಲೈಸೆನ್ಸ್ ಕೊಡುವ ಸಂದರ್ಭದಲ್ಲಿ ಚಾಲಕನ ಸಾಮರ್ಥ್ಯ ಪರೀಕ್ಷಿಸುವ ಸಂಬಂಧ ರೂಪಿಸಿರುವ ನಿಯಮಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ತನ್ನ ಪ್ರತಿಕ್ರಿಯೆ ತಿಳಿಸುವಂತೆ ಸೂಚಿಸಿದೆ.
ಡ್ರೈವಿಂಗ್ ಟೆಸ್ಟ್ ವೇಳೆ ಚಾಲಕನನ್ನು ಸರಿಯಾಗಿ ಪರೀಕ್ಷಿಸುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಕಗ್ಗದಾಸಪುರ ನಿವಾಸಿ ಎಸ್.ಗೌರಿ ಶಂಕರ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಕುರಿತು ಸರಕಾರ ತನ್ನ ಪ್ರತಿಕ್ರಿಯೆ ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು. ಇದೇ ವೇಳೆ ಸಾರಿಗೆ ಇಲಾಖೆ ಅಧಿಕಾರಿಗಳು ಚಾಲನಾ ಪರವಾನಿಗೆ ನೀಡುವ ವೇಳೆ ಅಭ್ಯರ್ಥಿಗಳನ್ನು ಹೇಗೆ ಪರೀಕ್ಷಿಸುತ್ತಾರೆ ಎಂಬುದನ್ನು ತಿಳಿಯಲು ಏಜೆನ್ಸಿ ನೇಮಿಸುವ ಅಗತ್ಯವಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರು ವಾದಿಸಿ, ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ನಿಯಮ 15 ರಡಿ 25 ಮಾರ್ಗಸೂಚಿಗಳಿದ್ದು, ಅವುಗಳ ಪ್ರಕಾರ ಡಿಎಲ್ ಟೆಸ್ಟ್ ನಡೆಸುವ ವೇಳೆ ಚಾಲಕನ ಸಾಮಥ್ರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಬೇಕು. ಎಲ್ಲ ಮಾರ್ಗಸೂಚಿಗಳ ಪ್ರಕಾರ ಚಾಲಕನ ಚಾಲನಾ ಸಾಮಥ್ರ್ಯವನ್ನು ಪರೀಕ್ಷಿಸಿದ ನಂತರವೇ ಡಿಎಲ್ ನೀಡುವ ಕುರಿತು ನಿರ್ಣಯಿಸಬೇಕು. ಆದರೆ, ಕೆಲ ಆರ್ಟಿಒ ಅಧಿಕಾರಿಗಳು ದಿನಕ್ಕೆ 75 ರಿಂದ 100 ಮಂದಿಯನ್ನು ಪರೀಕ್ಷೆ ಮಾಡಿ ಮುಗಿಸುತ್ತಿದ್ದಾರೆ. ಇದನ್ನು ಗಮನಿಸಿದರೆ, ಅಧಿಕಾರಿಗಳು ನಿಯಮ 15ನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ನಿಯಮ 15 ಚಾಲನಾ ಪರವಾನಿಗೆ ಬಯಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯನ್ನು ಪರೀಕ್ಷಿಸುವ ನಿಯಮಗಳ ಕುರಿತು ಹೇಳುತ್ತದೆ. ಚಾಲಕ ತನ್ನ ವಾಹನವನ್ನು ಹೇಗೆ ಚಲಾಯಿಸುತ್ತಾನೆ ಎಂಬುದರ ಜತೆಗೆ ವಾಹನ ಚಾಲನೆಗೆ ಮುನ್ನ ಮಿರರ್ ಹೊಂದಿಸಿಕೊಳ್ಳುವುದು, ಎಂಜಿನ್ ಸ್ಟಾರ್ಟ್ ಮಾಡುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು, ನಿಧಾನವಾಗಿ ಮತ್ತು ಸುಲಲಿತವಾಗಿ ವಾಹನವನ್ನು ಮುಂದಕ್ಕೆ ಬಿಡುವುದು, ಗೇರ್ ನ್ನು ಸೂಕ್ತ ರೀತಿಯಲ್ಲಿ ಬದಲಾಯಿಸುವುದು, ಟ್ರಾಫಿಕ್ ಸಂದರ್ಭದಲ್ಲಿ, ಇಳಿಜಾರು ಮತ್ತು ದಿಬ್ಬಗಳು ಎದುರಾದ ವೇಳೆ ವಾಹನದ ಮೇಲಿನ ನಿಯಂತ್ರಣ, ಓವರ್ ಟೇಕ್ ಮಾಡುವುದು, ಸಿಗ್ನಲ್ ನೀಡುವುದು ಸೇರಿದಂತೆ ಒಟ್ಟು 25 ವಿಷಯಗಳಲ್ಲಿ ಅಭ್ಯರ್ಥಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಬೇಕು ಎಂದು ತಿಳಿಸುತ್ತದೆ.





