ಕಾಪು: ಮೂರು ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆ
![ಕಾಪು: ಮೂರು ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆ ಕಾಪು: ಮೂರು ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆ](https://www.varthabharati.in/sites/default/files/images/articles/2021/07/14/298898-1626283607.jpg)
ಕಾಪು: ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದೇಶದಲ್ಲಿಯೇ ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ರೂಪುಗೊಳಿಸುವ ಯೋಜನೆಯನ್ನು ಪ್ರಸ್ತುತ ವರ್ಷ ಹಾಕಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಪು ಕ್ಷೇತ್ರಕ್ಕೆ ಒದಗಿಸಿದ ಮೂರು ಆ್ಯಂಬುಲೆನ್ಸ್ ಗಳನ್ನು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಪ್ರತೀ ವಿಧಾನ ಸಭಾ ಕ್ಷೇತ್ರಗಳಲ್ಲೂ 2 ಮಾದರಿ ಆರೋಗ್ಯ ಕೇಂದ್ರ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು.
ರಾಜ್ಯದಲ್ಲಿ 2,000 ವೈದ್ಯರನ್ನು 1 ವರ್ಷದ ಮಟ್ಟಿಗೆ ಗ್ರಾಮೀಣ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯ ಸೇವೆಯ ಒಡಂಬಡಿಕೆ ಯೊಂದಿಗೆ ಅವರನ್ನು ಸೇವೆಗೆ ನಿಯೋಜಿಸಲಾಗಿದೆ. ರಾಜ್ಯದಲ್ಲಿ 1,730 ಪೂರ್ಣಕಾಲಿಕ ವೈದ್ಯರನ್ನು ನೇಮಿಸಲಾಗಿದ್ದು, ನರ್ಸಿಂಗ್ ಸಿಬ್ಬಂದಿ ಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ಆ್ಯಂಬುಲೆನ್ಸ್ ಸೇವೆ ಉತ್ಕೃಷ್ಟ ಮಟ್ಟಕ್ಕೆ: ರಾಜ್ಯದಲ್ಲಿ ಸೇವೆ ನೀಡುತ್ತಿರುವ 108 ಆ್ಯಂಬುಲೆನ್ಸ್ ಗಳ ಸೇವೆಯನ್ನು ಉತ್ಕೃಷ್ಟ ಮಟ್ಟಕ್ಕೆ ಏರಿಸಲಾಗುತ್ತಿದೆ. ಪ್ರಸ್ತುತ 700 ಆ್ಯಂಬುಲೆನ್ಸ್ ಗಳಿದ್ದು, ಮುಂದೆ 1,500 ಸಂಖ್ಯೆಗೆ ಏರಿಸಲಾಗುವುದು. ಆ್ಯಂಬುಲೆನ್ಸ್ ಸೇವೆ, ಮತ್ತು ಗುಣಮಟ್ಟವನ್ನು ಆಧುನೀಕರಿಸಿ ರಾಜ್ಯದ ಪ್ರತೀ ಆರೋಗ್ಯ ಕೇಂದ್ರ ಅಥವಾ ಪ್ರತೀ 60 ಸಾವಿರ ಜನಸಂಖ್ಯೆಗೆ ಒಂದರಂತೆ 108 ಆ್ಯಂಬುಲೆನ್ಸ್ ಗಳನ್ನು ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.
ಶಾಸಕ ಲಾಲಾಜಿ ಆರ್. ಮೆಂಡನ್ ತನ್ನ ಪ್ರದೇಶಾಭಿವೃದ್ಧಿ ನಿಧಿಯಿಂದ ಕಾಪು, ಹಿಡಿಯಡ್ಕ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆ್ಯಂಬುಲೆನ್ಸ್ ಒದಗಿಸಿಕೊಟ್ಟಿರುವುದು ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಮಾದರಿಯಾಗಿದ್ದಾರೆ ಎಂದು ಸಚಿವ ಡಾ. ಸುಧಾಕರ ಶ್ಲಾಘಿಸಿದರು.
ಹಲ್ಲೆ ಖಂಡನೀಯ: ಆರೋಗ್ಯ ಸಿಬಂದಿಗಳ ಮೇಲಿನ ಹಲ್ಲೆ ಖಂಡನೀಯವಾಗಿದ್ದು, ಆರೋಗ್ಯ ಸಿಬಂದಿಗಳ ಮೇಲೆ ಹಲ್ಲೆಗಳಾದಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಹಲ್ಲೆ ಆರೋಪಿಗಳಿಗೆ ಗರಿಷ್ಠ ಏಳು ವರ್ಷ ಕಠಿಣ ಶಿಕ್ಷೆಗೊಳಪಡಿಸಲು ಅವಕಾಶಗಳಿದ್ದು, ಈ ಬಗ್ಗೆ ಜಿಲ್ಲಾಡಳಿತಗಳು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.
ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕಾಪುವಿನಲ್ಲಿ 100 ಬೆಡ್ನ ತಾಲೂಕು ಆಸ್ಪತ್ರೆಯನ್ನು ಆರಂಭಿಸಲು ವಿಶೇಷ ಒತ್ತು ನೀಡುವಂತೆ, ವ್ಯಾಕ್ಸಿನ್ ಲಭ್ಯತೆಯ ಕೊರತೆಯನ್ನು ನೀಗಿಸುವಂತೆ ಮತ್ತು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಯವರನ್ನೇ ಪೂರ್ಣಕಾಲಿಕ ವೈದ್ಯರನ್ನಾಗಿ ನಿಯೋಜಿಸುವಂತೆ ಸಚಿವ ಸುಧಾಕರ್ ಅವರಲ್ಲಿ ಮನವಿ ಮಾಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್, ವಿಶೇಷ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.