ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ 'ಮ್ಯೂಸಿಕಲ್ ಚೇರ್': ನಳಿನ್ ಕುಮಾರ್ ಕಟೀಲು

ಕಲಬುರಗಿ, ಜು. 15: `ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿ ಆಕ್ರಮಿಸಿಕೊಳ್ಳಲು ಮ್ಯೂಸಿಕಲ್ ಚೇರ್ ಸ್ಪರ್ಧೆ ಆರಂಭವಾಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಗುರುವಾರ ಬೀದರ್ ನಗರಕ್ಕೆ ತೆರಳಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತೆ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಬಹುದೊಡ್ಡ ವಂಚನೆ ಮಾಡಿದ್ದಾರೆ. ಮೊದಲು ಅಹಿಂದ ಹೆಸರು ಹೇಳಿಕೊಂಡು ಸಿಎಂ ಆದರು. ಆದರೆ ಸಿಎಂ ಆಗುತ್ತಿದ್ದಂತೆಯೇ ಅಹಿಂದ ಧ್ಯಾನ ಮಾಡುವುದನ್ನು ಮರೆತುಬಿಟ್ಟಿದ್ದರು ಎಂದು ಟೀಕಿಸಿದರು.
ಇದೀಗ ಸಿದ್ದರಾಮಯ್ಯ ಅವರು ಪುನಃ ಅಹಿಂದ ಕಾರ್ಡ್ ಬಳಕೆಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ ನಳಿನ್ ಕುಮಾರ್ ಕಟೀಲ್, ಜಗತ್ತಿನಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಭಾರತ ಎಂಬುದು ಈಗಾಗಲೆ ಎಲ್ಲರಿಗೂ ಗೊತ್ತಿದೆ. ಎಲ್ಲ ಕಡೆ ಲಸಿಕೆ ದಾಸ್ತಾನು ಇದೆ. ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಆಭಯ ನೀಡಿದರು.
ಇದೀಗ ದೇಶದಲ್ಲಿ ಐದು ಕಂಪೆನಿಗಳು ಲಸಿಕೆ ನೀಡುತ್ತಿವೆ. ಡಿಸೆಂಬರ್ ಒಳಗೆ ಎಲ್ಲರಿಗೂ ಲಸಿಕೆ ನೀಡುವ ಪ್ರಯತ್ನ ಜಾರಿಯಲ್ಲಿದೆ. ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೊಸದಿಲ್ಲಿಗೆ ಹೋಗುವ ಪರಿಪಾಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ದಿಲ್ಲಿಗೆ ಹೋಗುತ್ತಿದ್ದಾರೆ. ಇನ್ನು, ಮಂತ್ರಿ ಮಂಡಲದ ರಚನೆ ಏನಿದ್ದರೂ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಣೆ ನೀಡಿದರು.
ಶಾಸಕರು ತಮ್ಮ ವೈಯಕ್ತಿಕ ಕೆಲ-ಕಾರ್ಯಗಳಿಗೆ ಹೊಸದಿಲ್ಲಿಗೆ ಹೋಗುವುದರಲ್ಲಿ ತಪ್ಪೇನಿಲ್ಲ. ಆಗಾಗ ಶಾಸಕರು ತಮ್ಮ ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ದಿಲ್ಲಿಗೆ ಹೋಗುತ್ತಿರುತ್ತಾರೆ ಎಂದು ವಿವರಣೆ ನೀಡಿದ ಕಟೀಲ್, ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲಗಳು ಇಲ್ಲ. ಗೊಂದಲ, ಆಂತರೀಕ ಜಗಳಗಳೇನಿದ್ದರೂ ಕಾಂಗ್ರೆಸ್ ಪಕ್ಷದಲ್ಲಿದೆ. ನಮ್ಮಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದರು.







