ಕುಲಶೇಖರ ಬಳಿ ರೈಲ್ವೆ ಹಳಿಗೆ ತಡೆಗೋಡೆ ಕುಸಿತ: ರೈಲು ಸಂಚಾರ ರದ್ದು

ಮಂಗಳೂರು, ಜು.16: ನಗರದ ಹೊರವಲಯದ ಕುಲಶೇಖರ ಬಳಿ ರೈಲ್ವೇ ಹಳಿ ಮೇಲೆ ಮಧ್ಯಾಹ್ನ ಮಣ್ಣು ಸಹಿತ ತಡೆಗೋಡೆ ಕುಸಿದು ಬಿದ್ದು ಕೊಂಕಣ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮಂಗಳೂರು ಮೂಲಕ ಕೊಂಕಣ ರೈಲು ಸಂಪರ್ಕಿಸುವ ಈ ಹಳಿಯಲ್ಲಿ ಸಂಚರಿಸುವ ರೈಲುಗಳನ್ನು ರದ್ದುಪಡಿಸಲಾಗಿದೆ. ಮುಂಬೈಯಿಂದ ಕೊಂಕಣ ರೈಲು ಮೂಲಕ ಮಂಗಳೂರಿಗೆ ಆಗಮಿಸುವ ರೈಲುಗಳನ್ನು ತೋಕೂರಿನಿಂದ ಮರಳಿ ಅದೇ ಮಾರ್ಗದಲ್ಲಿ ಹಿಂದಕ್ಕೆ ಕಳುಹಿಸುವ ವ್ಯವಸ್ಥೆ ಆಗುತ್ತಿದೆ. ಮುಂಬೈಗೆ ತೆರಳುವ ಮತ್ಸ್ಯಗಂಧಾ ಎಕ್ಸ್ಪ್ರೆಸ್ ಈಗಾಗಲೇ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ಬಾಕಿಯಾಗಿದೆ.
ಪಾಲ್ಘಾಟ್ ವಿಭಾಗಕ್ಕೆ ಸೇರಿದ ಕುಲಶೇಖರ ಸುರಂಗ ಮಾರ್ಗ ಸಮೀಪ ಭಾರಿ ಮಳೆಗೆ ತಡೆಗೋಡೆ ಕುಸಿದು ಹಳಿಗೆ ಬಿದ್ದಿದೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಮಣ್ಣು ಕುಸಿದು ಹಳಿಗೆ ಬಿದ್ದ ಕಾರಣ ಎರಡು ದಿನಗಳ ಕಾಲ ರೈಲು ಸಂಚಾರ ಬಂದ್ ಆಗಿತ್ತು. ಆ ಬಳಿಕ ಮಣ್ಣು ಕುಸಿಯುವ ಜಾಗದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಕಳೆದ ಎರಡು ದಿನಗಳ ಭಾರೀ ಮಳೆಯಿಂದ ತಡೆಗೋಡೆಯಲ್ಲಿ ಬಿರುಕು ಬಿಟ್ಟು ಹಳಿ ಮೇಲೆ ಬಿದ್ದಿದೆ. ಸ್ಥಳಕ್ಕೆ ಪಾಲ್ಘಾಟ್ ರೈಲ್ವೇ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಳಿಯಲ್ಲಿ ಬಿದ್ದಿರುವ ಕಲ್ಲು ಮಣ್ಣು ತೆರವು ಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.












